ಮುಳಬಾಗಲಿನಲ್ಲಿ ಪುರಂದರದಾಸರ ಸಂಶೋಧನಾ ಪ್ರತಿಷ್ಠಾನ ಉದ್ಘಾಟನೆ
ಮುಳಬಾಗಲು : ಇಲ್ಲಿ ನಡೆಯುತ್ತಿರುವ ಮೂರು ದಿನಗಳ ಶ್ರೀಪುರಂದರ ದಾಸರ ಆರಾಧನೆ ಮಹೋತ್ಸವದಲ್ಲಿ ರಾಜ್ಯಾದ್ಯಂತದಿಂದ ಆಗಮಿಸಿರುವ ಸುಮಾರು 300ಕ್ಕೂ ಹೆಚ್ಚು ಸಂಗೀತ ವಿದ್ವಾಂಸರು ಪಾಲ್ಗೊಂಡಿದ್ದಾರೆ. ಆರಾಧನೆ ಮಹೋತ್ಸವದ ಈ ಬಾರಿಯ ವಿಶೇಷ, ದಾಸಶ್ರೇಷ್ಠರ ನವರತ್ನ ಮಾಲಿಕೆಯ ಗಾಯನ.
ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಸಂಗೀತಗಾರರು ಪಾಲ್ಗೊಂಡಿದ್ದರು. ಹೆಸರಾಂತ ಸಂಗೀತಗಾರ ಆರ್.ಕೆ. ಪದ್ಮನಾಭ ಮತ್ತು ಕುರುಡಿ ವೆಂಕಣ್ಣಾಚಾರ್ ನೇತೃತ್ವದಲ್ಲಿ ವೃಂದಗಾನ ಕಾರ್ಯಕ್ರಮ ಜರುಗಿತು. ಶ್ರೀ ಪುರಂದರ ಆರಾಧನೆ ಸಮಿತಿ ಆಯೋಜಿಸಿರುವ ಈ ಉತ್ಸವ ಸೋಮವಾರದಿಂದಲೇ ಆರಂಭಗೊಂಡಿದೆ.
ಹೆಸರಾಂತ ಸಂಗೀತ ವಿದ್ವಾಂಸರಾದ ಆರ್.ಕೆ. ಶ್ರೀಕಂಠನ್, ಆರ್.ಆರ್. ಕೇಶವಮೂರ್ತಿ, ಚಂದ್ರಮೌಳಿ ಮತ್ತು ನಂದಕುಮಾರ್ ಮೊದಲಾದವರು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಇದಲ್ಲದೆ ಶ್ಯಾಮಲಾ ಜೀ ಭಾವೆ ಸೇರಿದಂತೆ ನೂರಕ್ಕೂ ಹೆಚ್ಚು ಸಂಗೀತಗಾರರು ವೈಯಕ್ತಿಕ ಗಾಯನ ಕಾರ್ಯಕ್ರಮಗಳನ್ನು ನೀಡಿದರು. ಇದಕ್ಕೂ ಮುನ್ನ ಸಂತ ಅಚ್ಯುತದಾಸರು ಶ್ರೀ ಪುರಂದರ ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...