ಭಾರತವು ಎರಡನೇ ಸುತ್ತಿನ ಆರ್ಥಿಕ ಸುಧಾರಣೆಗೆ ಮುಂದಾಗಬೇಕು : ಅಮೆರಿಕ
ಬೆಂಗಳೂರು : ಭಾರತವು ಎರಡನೇ ಹಂತದ ಆರ್ಥಿಕ ಸುಧಾರಣೆಗೆ ಮುಂದಾಗಬೇಕು ಎಂದು ಅಮೆರಿಕವು ಭಾನುವಾರ ಸಲಹೆ ಮಾಡಿದೆ. 90ರ ದಶಕದಲ್ಲಿ ಭಾರತದಲ್ಲಿ ಮೊದಲ ಹಂತದ ಆರ್ಥಿಕ ಸುಧಾರಣೆ ಆರಂಭವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಎರಡನೇ ಹಂತದ ಆರ್ಥಿಕ ಸುಧಾರಣೆ ಅನಿವಾರ್ಯ ಎಂದು ಅಮೆರಿಕಾ ತಿಳಿಸಿದೆ.
ಭಾರತ ಭೇಟಿಗೆ ಆಗಮಿಸಿರುವ ಅಮೆರಿಕ ಖಜಾನೆ ಉಪ ಕಾರ್ಯದರ್ಶಿ ಕೆನೆತ್ ಡಬ್ಯ್ಲೂ ಡ್ಯಾಮ್ ಅವರು ಇಂದು ಈ ವಿಷಯವನ್ನು ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಆರ್ಥಿಕ ಸುಧಾರಣೆಯ ಅಗತ್ಯವನ್ನು ವಿವರಿಸಿದರು.
ಭಯೋತ್ಪಾದನೆಯಿಂದ ಯಾವುದೇ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುತ್ತದೆ. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಎಲ್ಲರ ಆದ್ಯಕರ್ತವ್ಯ ಎಂದೂ ಅವರು ಹೇಳಿದರು. ಆರ್ಥಿಕ ಉದಾರೀಕರಣ ಹಾಗೂ ಖಾಸಗೀಕರಣದಿಂದ ಆರ್ಥಿಕ ಕ್ಷೇತ್ರದಲ್ಲಾಗುವ ಬದಲಾವಣೆಗಳ ಬಗ್ಗೆಯೂ ಅವರು ವಿವರಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...