ಮಂಕಾಗಿರುವ ಭವಿಷ್ಯದ ಭವಿಷ್ಯ:ಜ್ಯೋತಿಷ್ಯ ಸಮ್ಮೇಳನದಲ್ಲಿ ಆತಂಕ
ಉಡುಪಿ: ಜ್ಯೋತಿಷ್ಯ ಶಾಸ್ತ್ರ ಕುಂಟುತ್ತಿರುವುದೇಕೆ ?
ಅಧ್ಯಯನದ ಕೊರತೆ, ಪಂಚಾಂಗ ರೂಪಿಸುವಲ್ಲಿ ತಪ್ಪು ಲೆಕ್ಕಾಚಾರ, ಮಂತ್ರ ಸಿದ್ಧಿ ಹಾಗೂ ವಾಕ್ಸಿದ್ಧಿಯ ಕೊರತೆ.. ಇವೆಲ್ಲ ಭವಿಷ್ಯದ ಉಜ್ವಲ ಭವಿಷ್ಯಕ್ಕೆ ಸಂಚಕಾರಗಳು. ವಿವಿಧ ಕಾರಣಗಳಿಂದಾಗಿ ಜ್ಯೋತಿಷ್ಯ ಶಾಸ್ತ್ರ ಕುಂಟುತ್ತಿರುವುದಕ್ಕೆ ಶನಿವಾರ ಉಡುಪಿಯಲ್ಲಿ ಪ್ರಾರಂಭವಾದ ಎರಡು ದಿನಗಳ ಅಖಿಲ ಭಾರತ ಜ್ಯೋತಿಷ್ಯ ಸಮ್ಮೇಳನ ಆತಂಕ ವ್ಯಕ್ತಪಡಿಸಿತು.
ಅಖಿಲ ಭಾರತ ಜ್ಯೋತಿಷ್ಕರ ಸಂಘದ ಸದಸ್ಯರಿಗೆ ಈ ಸಮ್ಮೇಳನ ಪುನರುಜ್ಜೀವನ ನೀಡಬಹುದೆನ್ನುವ ವಿಶ್ವಾಸವನ್ನು ಸಮ್ಮೇಳನದ ಅಧ್ಯಕ್ಷ ಕಲ್ಯ ಗೋಪಾಲ ಭಟ್ ವ್ಯಕ್ತಪಡಿಸಿದರು. ಜ್ಯೋತಿಷ್ಯದ ಬಗೆಗಿರುವ ಅನೇಕ ಆಕ್ಷೇಪಗಳಿಗೆ ಉತ್ತರಗಳನ್ನು ಹಾಗೂ ವಿವಾದಗಳಿಗೆ ಪರಿಹಾರವನ್ನು ಈ ಸಮ್ಮೇಳನ ಕಂಡುಕೊಳ್ಳಲಿದೆ ಎಂದು ಅವರು ಹೇಳಿದರು.
ಮಾನವ ಜನಾಂಗದ ಒಳಿತಿಗಾಗಿ ಹಾಗೂ ಪ್ರಸ್ತುತ ಕಾಲಮಾನಕ್ಕೆ ಹೊಂದುವಂತೆ ಭವಿಷ್ಯ ಶಾಸ್ತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ನಿಲುವು, ಧೋರಣೆಗಳನ್ನು ಬದಲಿಸಿಕೊಳ್ಳಬೇಕಾಗಿದೆ ಎಂದು ಗೋಪಾಲ ಭಟ್ ಹೇಳಿದರು.
ಪೂರ್ವ ಕಾಲದಲ್ಲಿ ಗುರುಕುಲಗಳಲ್ಲಿ ಕಲಿಸುತ್ತಿದ್ದ ಭವಿಷ್ಯ ಶಾಸ್ತ್ರವನ್ನು ವಿಶ್ವ ವಿದ್ಯಾಲಯಗಳಲ್ಲಿ ಅಳವಡಿಸುವ ಕುರಿತು ಮಾತನಾಡಿದ ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್, ಭವಿಷ್ಯದ ಕುರಿತು ಮಾತನಾಡುವುದು ಹಾಗೂ ವಿರೋಧಿಸುವುದು ಇತ್ತೀಚೆಗೆ ಫ್ಯಾಷನ್ ಆಗಿದೆ ಎಂದರು. ನಮ್ಮ ಯುವ ಜನಾಂಗ ಸಂಸ್ಕೃತಿಯ ಸಂಪತ್ತಿನ ಬಗ್ಗೆ ಅಜ್ಞಾನ ಹೊಂದಿದೆ. ಆದರೆ, ಇದೇ ಅವಧಿಯಲ್ಲಿ ಜ್ಯೋತಿಷ್ಯ ಅಧ್ಯಯನಕ್ಕಾಗಿ ವಿದೇಶಿಯರು ಭಾರತಕ್ಕೆ ಬರುತ್ತಿದ್ದಾರೆ ಎಂದು ಸುಮಾ ವಸಂತ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...