ಸಾಫ್ಟ್ವೇರ್ ನಕಲು ಹಾವಳಿ ತಡೆಗೆ ರಾಜ್ಯ ಸರಕಾರದ ವಿಶೇಷ ಕ್ರಮ
ಬೆಂಗಳೂರು : ನಕಲಿನ ಹಾವಳಿ ಕ್ಯಾಸೆಟ್ ಉದ್ಯಮ ಹಾಗೂ ಸಾಫ್ಟ್ವೇರ್ ಉದ್ಯಮ ಎರಡನ್ನೂ ಕಂಗೆಡಿಸಿದೆ. ಆದರೆ, ಕಷ್ಟಾರ್ಜಿತವಾದ ಸಾಫ್ಟ್ವೇರ್ ಅನ್ನು ನಕಲು ಮಾಡದಂತೆ ತಡೆಯುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಯಾರನ್ನೇ ಕೇಳಿದರೂ ಇದು ಅಸಾಧ್ಯದ ಮಾತು ಎಂದು ಹೇಳಿ ಸುಮ್ಮನಾಗುತ್ತಾರೆ.
ಆದರೆ, ಕರ್ನಾಟಕ ಸರಕಾರ ನಕಲಿ ಹಾವಳಿ ತಡೆಗಟ್ಟಿ ಸಾಫ್ಟ್ವೇರ್ ಎಂಬ ಆಸ್ತಿಯನ್ನು ಉಳಿಸಲು ಉತ್ಸುಕವಾಗಿದೆ. ರಾಜ್ಯದಲ್ಲಿ ಸಾಫ್ಟ್ವೇರ್ ತಯಾರಿಕೆ ಮತ್ತು ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜನವರಿ ಮೊದಲ ವಾರದಲ್ಲಿ ಸಾಫ್ಟ್ವೇರ್ ಆಸ್ತಿ ನಿರ್ವಹಣೆ ಕುರಿತ ವಿಚಾರ ಸಂಕಿರಣವನ್ನೇ ಏರ್ಪಡಿಸಿದೆ.
ಬಿಸಿನೆಸ್ ಸಾಫ್ಟ್ವೇರ್ ಅಲಯನ್ಸ್ ಮತ್ತು ಕರ್ನಾಟಕ ಸರಕಾರದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳುವರು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಭಾರತದ ಸಿಲಿಕಾನ್ ಕಣಿವೆ, ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ ನಕಲಿ ಸಾಫ್ಟ್ವೇರ್ ಹಾವಳಿಯನ್ನು ಶಿಸ್ತುಬದ್ಧವಾಗಿ ಹತ್ತಿಕ್ಕಲು ರಾಜ್ಯ ಸರಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದಲ್ಲಿ ಬರುವ ಫೆಬ್ರವರಿಯಿಂದ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಜನವರಿಯಲ್ಲಿ ನಡೆಯಲಿರುವ ವಿಚಾರ ಸಂಕಿರಣ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ