ಕೇಂದ್ರದಿಂದ ಸಾರ್ವಜನಿಕ ವಲಯಗಳ ಲೂಟಿ- ಮನಮೋಹನ್ ಸಿಂಗ್
ಬೆಂಗಳೂರು : ಬಂಡವಾಳ ಹಿಂತೆಗೆತದ ಹೆಸರಿನಲ್ಲಿ ಸಾರ್ವಜನಿಕ ವಲಯಗಳನ್ನು ಕೇಂದ್ರದಲ್ಲಿನ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಸರ್ಕಾರ ದೋಚುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.
ಸಾರ್ವಜನಿಕ ವಲಯಗಳಿಂದ ಬಂಡವಾಳ ವಾಪಸ್ಸಾತಿ ಕುರಿತು ಸರ್ಕಾರ ನಿರ್ದಿಷ್ಟ ನಿಲುವನ್ನು ಹೊಂದಿಲ್ಲ . ಸರ್ಕಾರ ಸಾಗುತ್ತಿರುವ ದಾರಿ ಸರಿಯಾಗಿಲ್ಲ . ಹಣದ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರ ಸಾರ್ವಜನಿಕ ವಲಯಗಳನ್ನು ದೋಚುತ್ತಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷಗಳ ನಾಯಕ ಮನಮೋಹನ್ ಸಿಂಗ್ ತಿಳಿಸಿದರು.
ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿರುವ ಸರ್ಕಾರದ ನಿರ್ಧಾರದ ಕುರಿತು ಪ್ರಶ್ನೆಯಾಂದಕ್ಕೆ ಉತ್ತರಿಸಿದ ಅವರು, ಸರ್ಕಾರದ ಇತ್ತೀಚಿನ ನಡಾವಳಿಗಳು ಆರ್ಥಿಕತೆಗೆ ಧಕ್ಕೆ ಉಂಟುಮಾಡುತ್ತವೆ ಎಂದು ಅಭಿಪ್ರಾಯಪಟ್ಟರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ. 5ಕ್ಕಿಂಥ ಕಡಿಮೆ ಇರುತ್ತದೆಂದು ತಾವು ನಿರೀಕ್ಷಿಸಿರುವುದಾಗಿ ಅವರು ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವಿತ್ತ ಸಚಿವ ಯಶವಂತ ಸಿನ್ಹಾ ಅವರು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಮನಮೋಹನ್ ಸಿಂಗ್, ಈ ಹೇಳಿಕೆ ಗಂಭೀರ ವಿಶ್ಲೇಷಣೆಯಿಂದ ಕೂಡಿದೆ ಎಂದು ನನಗನಿಸುವುದಿಲ್ಲ . ಆದರೆ, ಸಿನ್ಹಾ ಅವರ ಹೇಳಿಕೆ ನಿಜವಾಗಲಿ ಎಂದು ಹಾರೈಸುವುದಾಗಿ ಹೇಳಿದರು.
ಅರ್ಜೆಂಟೈನಾ ತಲುಪಿರುವ ಆರ್ಥಿಕ ದುಸ್ಥಿತಿಯನ್ನು ಭಾರತ ಕೂಡ ತಲುಪುವುದೇ ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಮನಮೋಹನ್ ಸಿಂಗ್- ಆರ್ಥಿಕ ಪರಿಸ್ಥಿತಿ ಉದ್ದೇಶಪೂರ್ವಕವಾಗಿ ತಪ್ಪು ನಿರ್ವಹಣೆಯಾದರೆ, ಅಂಥ ಆರ್ಥಿಕತೆಯನ್ನು ಯಾವ ಕಾನೂನು ಕೂಡ ರಕ್ಷಿಸಲಾರದು ಎಂದು ಮಾರ್ಮಿಕವಾಗಿ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...