ಪಟ್ಟದಕಲ್ಲು ಉತ್ಸವಕ್ಕೆ ಹೊಸಬಣ್ಣ! ಅದೀಗ ‘ಚಾಲುಕ್ಯ ಉತ್ಸವ
ಬಾಗಲಕೋಟೆ : ಪಟ್ಟದ ಕಲ್ಲು ಮತ್ತು ಐಹೊಳೆ ದೇವಾಲಯ ಪ್ರದೇಶದಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಈ ಬಾರಿ ಚಾಲುಕ್ಯ ಉತ್ಸವ ಎಂಬ ಹೆಸರಿನಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಜನವರಿ 27ರಿಂದ ಮೂರು ದಿನಗಳ ಕಾಲ ನಡೆಯುವ ಈ ಉತ್ಸವ ಪಟ್ಟದಕಲ್ಲಿನಲ್ಲಿ ಉದ್ಘಾಟನೆಗೊಳ್ಳಲಿದೆ. 28ರಂದು ಬಾದಾಮಿಯಲ್ಲಿ ವಿಚಾರ ಸಂಕಿರಣ ಹಾಗೂ 29ರಂದು ಐಹೊಳೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಲ್ಲದೆ ಪಟ್ಟದ ಕಲ್ಲು ಮತ್ತು ಐಹೊಳೆಯಲ್ಲಿ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಉತ್ಸವ ಆಚರಣೆ ಸಮಿತಿಯ ಅಧ್ಯಕ್ಷ, ಜಿಲ್ಲಾಧಿಕಾರಿ ಗಂಗಾರಾಮ ಬಡೇರಿಯಾ ಬುಧವಾರ ತಿಳಿಸಿದ್ದಾರೆ.
ಪಟ್ಟದ ಕಲ್ಲು ಉತ್ಸವ ಚಾಲುಕ್ಯರ ಆಡಳಿತ ವೈಭವವನ್ನು ನೆನಪಿಸಿಕೊಳ್ಳುವ ಉತ್ಸವವಾದ್ದರಿಂದ ಅದರಲ್ಲೂ ಪಟ್ಟದಕಲ್ಲು- ಬಾದಾಮಿ ಉತ್ಸವ ಎಂದು ಕರೆಯುವ ಬದಲಾಗಿ ಚಾಲುಕ್ಯ ಉತ್ಸವ ಎನ್ನುವುದು ಸೂಕ್ತ ಎಂದು ಅನೇಕ ವರ್ಷಗಳಿಂದ ಸಾರ್ವಜನಿಕರು ಸರಕಾರಕ್ಕೆ ಸಲಹೆ ಮಾಡುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷ ಉತ್ಸವದ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
ಮೂರು ದಿನ ಗಳ ಕಾಲ ನಡೆಯುವ ಚಾಲುಕ್ಯಉತ್ಸವ ರಾಷ್ಟ್ರೀಯ ಉತ್ಸವವಾದ್ದರಿಂದ 10 ಲಕ್ಷ ರೂಪಾಯಿ ಹಣ ಮಂಜೂರು ಮಾಡುವಂತೆ ರಾಜ್ಯ ಸರಕಾರವನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...