ಚಕ್ರವ್ಯೂಹದ ನಡುವೆ ವಿಧಾನಸೌಧ! ಅಭಿಮನ್ಯುಗಳಿಗಷ್ಟೇ ಪ್ರವೇಶ!
ಬೆಂಗಳೂರು : ಘನ ಗಾಂಭೀರ್ಯ ಹಾಗೂ ಭವ್ಯ ಆಕೃತಿಯಿಂದ ಜನ ಸಾಮಾನ್ಯರಲ್ಲಿ ದಿಗಿಲು ಹುಟ್ಟಿಸುವ ಕೆಂಗಲ್ ನಿರ್ಮಿತ ವಿಧಾನಸೌಧ ಈಗ ಎರಡನೇ ಬೇಲಿಯ ಅಲಂಕಾರಕ್ಕೆ ಅಣಿಗೊಂಡಿದೆ.
ಸೆಪ್ಟಂಬರ್11 ರಂದು ಅಮೆರಿಕಾದ ಪ್ರತಿಷ್ಠಿತ ಕಟ್ಟಡಗಳ ಮೇಲೆ ಹಾಗೂ ಡಿಸೆಂಬರ್ 13 ರಂದು ದೆಹಲಿಯಲ್ಲಿನ ಸಂಸತ್ ಭವನದ ಮೇಲೆ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಸರ್ಪಗಾವಲಿನ ಬೇಲಿಗೆ ತುತ್ತಾಗಿದ್ದ ವಿಧಾನಸೌಧಕ್ಕೆ ಇದೀಗ ತಂತಿ ಬೇಲಿಯ ರಕ್ಷಣೆ. ಕರ್ನಾಟಕ ರಾಜಕಾರಣದ ಕೇಂದ್ರಬಿಂದುವಾದ ವಿಧಾನಸೌಧಕ್ಕೆ ಹತ್ತು ಅಡಿ ಎತ್ತರದ ತಂತಿಬೇಲಿಯನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ.
ಅಭಿಮನ್ಯುಗಳಿಗಷ್ಟೇ ಅವಕಾಶ
ಇನ್ನು ಮುಂದೆ ವಿಧಾನಸೌಧಕ್ಕೆ ಚಕ್ರವ್ಯೂಹದ ರಕ್ಷಣೆ. ಪರಿಣಾಮವಾಗಿ ವಿಧಾನಸೌಧ ಪ್ರವೇಶ ಅಸಹಾಯ ಶೂರ ಅಭಿಮನ್ಯುಗಳಿಗಷ್ಟೇ ಸಾಧ್ಯ. ಅನಕ್ಷರಸ್ಥರಿಗೆ, ಜನ ಸಾಮಾನ್ಯರಿಗೆ, ರಾಜಕಾರಣಿ ಹಾಗೂ ಅಧಿಕಾರಿಗಳ ಬಗೆಗೊಂದು ಸಣ್ಣ ಭಯ ಹಾಗೂ ಅಸಹ್ಯ ಇಟ್ಟುಕೊಂಡವರಿಗೆ, ವಿದ್ಯೆಯಿದ್ದೂ ವಿನಯ ಉಳಿಸಿಕೊಂಡವರಿಗೆ.. ಇವರಿಗೆಲ್ಲ ವಿಧಾನಸೌಧವಿನ್ನು ಮುಗಿಲ ಮಲ್ಲಿಗೆ!
ಭರವಸೆಗಳ ಪೂರ ಹರಿಸಿ ಓಟು ಪಡೆದು ಬೆಂಗಳೂರು ಪಾಲಾಗಿ ಮಂತ್ರಿಗಳಾದ ಮಂದಿಗೆ, ಕೆಲಸ ಮಾಡಿಸಿಕೊಳ್ಳಲು ಹುಡುಕಿಕೊಂಡು ಬರುವ ಕ್ಷೇತ್ರದ ಮುಗ್ಧ ಜನತೆಯಿಂದ ತಲೆ ಮರೆಸಿಕೊಳ್ಳಲೊಂದು ಅಡಗುತಾಣ. ಬೆತ್ತ, ಬಂದೂಕುಗಳ ಅಬ್ಬರದಲ್ಲಿ - ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಬರಹಕ್ಕೆ ತಲೆ ಮರೆಸಿಕೊಳ್ಳುವುದೇ ಗತಿ. ಸತ್ಯಮೇವ ಜಯತೆ!
ತಂತಿಬೇಲಿ ಅಳವಡಿಕೆಯ ನಂತರ ಪೂರ್ವ ಮತ್ತು ಪಶ್ಚಿಮ ದ್ವಾರಗಳಿಂದ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಸಾಧ್ಯ. ಪೊಲೀಸರ ಹದ್ದಿನ ಕಣ್ಣಿನ ಕಾವಲು, ತಂತಿಬೇಲಿ... ಒಳ ಹೋಗುವುದೂ ಸುಲಭವಲ್ಲ , ಹೊರ ಬರುವುದೂ ಮುಜುಗರದಿಂದ ಮುಕ್ತವಲ್ಲ . ಅಂದರೆ, ವಿಧಾನಸೌಧ ಹಂತ ಹಂತವಾಗಿ ಕಾರಾಗೃಹವಾಗಿ ಪರಿವರ್ತನೆಯಾಗುತ್ತಿದೆ ಎಂದಾಯಿತು. ಜೈ ಕನ್ನಡಾಂಬೆ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications