ಕ್ರಿಸ್ತನ ಹೊಸ ‘ಅವತಾರ’
*ಡಾ।। ಉದಯ ರವಿ ಎಸ್.ವಿ.
1947 ರ ಜನವರಿಯ ಒಂದು ದಿನ, ಸಂಜೆಯಾಗುತ್ತಾ ಬಂದಿತ್ತು . ಈ ಮೇಕೆಗಳೋ ಜುಮಾನ ಮಾತು ಕೇಳದೆ ಇನ್ನೂ ಎತ್ತರೆತ್ತರಕ್ಕೆ ಬಂಡೆಗಳನ್ನು ಹತ್ತುತ್ತಲೇ ಹೋದವು. ಮೇಕೆಗಳನ್ನು ಕಡೆಗೂ ಹಿಡಿದು ಇಳಿಯಬೇಕು ಎನ್ನುವಷ್ಟರಲ್ಲಿ ಎದುರಿನ ಬೋಳು ಬೆಟ್ಟದಲ್ಲಿ ಕರ್ರಗೆ ಬಾಯ್ದೆರೆದು ಎದುರಿನ ಮೃತ ಸರೋವರವನ್ನು ನೋಡುತ್ತಿದ್ದ ಗುಹೆಯಾಂದು ಕಾಣಿಸಿತು. ಇಂತಹ ಗುಹೆಗಳು ಈ ಕುಮ್ರಾನಿನಲ್ಲಿ ಸಾವಿರಾರು ಇರುವುದರಿಂದ ಅವನ ಕುತೂಹಲವೇನೂ ಇದರತ್ತ ಸೆಳೆಯಲಿಲ್ಲ . ಹುಡುಗಾಟಿಕೆಗೆ, ಕೈಗೆ ಸಿಕ್ಕ ಕಲ್ಲನ್ನು ಆ ಗುಹೆಯ ಬಾಯಲ್ಲಿ ಎಸೆದ. ಅಲ್ಲಿಂದ ಏನೋ ಒಡೆದ ಶಬ್ದ ಕೇಳಿಸಿತು. ಕುತೂಹಲ ಉಂಟಾಯಿತು. ಕೆಳಗೆ ಇನ್ನಷ್ಟು ಕುರಿಗಳನ್ನು ಕಾಯುತ್ತಿದ್ದ ಅವನ ಸಹಚರರಾದ ಖಲೀಲ್ ಮತ್ತು ಮೊಹಮ್ಮದ್ರನ್ನು ಮೇಲೆ ಬರಹೇಳಿ, ನಡೆದ ವಿಷಯ ತಿಳಿಸಿದ.
ಈ ನಿರ್ಜನ ಗುಹೆಗಳಲ್ಲಿ ಏನಿದ್ದಿರಬಹುದು? ನಿಧಿಯೇ? ಆ ವೇಳೆಗೆ ಕತ್ತಲಾಗುತ್ತಾ ಬಂದುದರಿಂದ ತಮ್ಮ ಮೇಕೆಗಳನ್ನು ಎಳೆದುಕೊಂಡು ಮನೆಗೆ ತೆರಳಿದರು. ಬಹುಶಃ ನಾಳೆ ನಮಗೆ ನಿಧಿ ಸಿಕ್ಕರೆ, ಈ ದರಿದ್ರ ಕೆಲಸದಿಂದ ವಿಮೋಚನೆ ಸಿಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದರು. ಮರುದಿನ ಬೆಳಕು ಹರಿಯುತ್ತಿದ್ದಂತೆಯೇ ಅವರು ಗುಹೆಗಳ ಕಡೆ ಹೊರಟರು. ಆ ಗುಹೆಯಾಳಗೆ ಅನೇಕ ಮಡಿಕೆ ಚೂರುಗಳು ನೆಲವನ್ನು ತುಂಬಿದ್ದವು. ಗೋಡೆಯ ಉದ್ದಕ್ಕೂ ನಿಲ್ಲಿಸಿದ್ದ ಸಣ್ಣ ಕಂಠದ ಅನೇಕ ಜಾಡಿಗಳಿದ್ದವು. ಬೋಗುಣಿಯಾಕಾರದ ಅದರ ಮುಚ್ಚಳಗಳೂ ಸುಸ್ಥಿತಿಯಲ್ಲಿದ್ದವು.
ಬಂಗಾರ ಸಿಗಲಿಲ್ಲ, ಇತಿಹಾಸ ಸಿಕ್ಕಿತು
ಆವೇಶ ಬಂದವನಂತೆ ಒಂದೊಂದು ಜಾಡಿಯಲ್ಲೂ ಕೈಹಾಕಿ ನಿಧಿಯನ್ನು ಹೊರ ತೆರೆಯಲು ಪ್ರಯತ್ನಿಸಿದ... ಪಾಪ! ಬಂಗಾರದ ಯಾವ ನಿಧಿಯೂ ಅವನಿಗೆ ಸಿಗಲಿಲ್ಲ . ಮಾಸಿ, ಹಸಿರು ಬಣ್ಣಕ್ಕೆ ತಿರುಗಿದ್ದ ಬಟ್ಟೆಗಳಲ್ಲಿ ಹೊಲಿದಿದ್ದ ಕೆಲವು ಪೊಟ್ಟಣಗಳು ಅದರಲ್ಲಿ ಸಿಕ್ಕವು. ಬಂಗಾರ ಸಿಗಲಿಲ್ಲವೆಂದು ಸಹಚರರೆಲ್ಲಾ ತುಂಬಾ ಬೇಸರ ಪಟ್ಟುಕೊಂಡರು.
ಆದರೆ ಅಂದು ಅವರು ಹುಡುಕಿದ ವಸ್ತು ಪ್ರಪಂಚದ ಅತ್ಯಂತ ಪುರಾತನ ಹಸ್ತಪ್ರತಿಗಳ ನಿಧಿ ಎಂದೂ, ಹಾಗೂ ಬೈಬಲ್ ಅನ್ನು ನೋಡುವ ದಿಕ್ಕನ್ನೇ ಬದಲಿಸಬಲ್ಲ ಅಪೂರ್ವ ಮಾಹಿತಿಯೆಂದೂ ಅವರಿಗೆ ಗೊತ್ತಿರಲಿಲ್ಲ . ಮೃತ ಸರೋವರದ ದಾಖಲೆ ಸುರುಳಿ ಎಂದೇ ಹೆಸರುವಾಸಿ ಆಗಿರುವ ಈ ಹಸ್ತಪ್ರತಿಗಳು ಹೀಬ್ರು ಭಾಷೆಯಲ್ಲಿ ಬರೆದಿರುವ ಬೈಬಲ್ಗಿಂತಲೂ ಏನಿಲ್ಲವೆಂದರೂ ಸಾವಿರ ವರ್ಷಗಳಷ್ಟು ಹಳೆಯವು. ಏಸು ಕ್ರಿಸ್ತ ಹುಟ್ಟುವುದಕ್ಕಿಂತ ಸುಮಾರು ನೂರು ವರ್ಷಗಳ ಮುಂಚೆ ಈ ಹಸ್ತಪ್ರತಿಗಳನ್ನು ಬರೆಯಲಾಗಿದೆ ಎಂದೂ ಹೇಳುತ್ತಾರೆ.
***
ಮೃತ ಸರೋವರದ ವಾಯುವ್ಯ ದಿಕ್ಕಿನಲ್ಲಿ ಜೆರುಸೆಲಂ ಪಟ್ಟಣದಿಂದ ಪೂರ್ವಕ್ಕೆ 14 ಮೈಲಿಗಳಷ್ಟು ದೂರದಲ್ಲಿ ಕುಮ್ರಾನ್ ಮತ್ತು ಎನಿಸಿ ಇದೆ. ಚರ್ಚುಗಳು ಹೇಳಿ ಕೊಡುವಂತೆ, ಬಹುತೇಕ ಜನರು ನಂಬುವಂತೆ, ಜೀಸಸ್ ಹುಟ್ಟಿದ್ದು ಬೆತ್ಲೆಹೆಮ್ಮಿನಲ್ಲೂ ಅಲ್ಲ , ಬೆಳೆದದ್ದು ಜೆರುಸೆಲಂನಲ್ಲೂ ಅಲ್ಲ . ಇತ್ತೀಚಿನ ವಿದ್ವಾಂಸರ ಪ್ರಕಾರ ಜೀಸಸ್ ಕ್ರೆೃಸ್ಟ್ ಹುಟ್ಟಿದ್ದು , ಬೆಳೆದದ್ದು ಎಲ್ಲ ಈ ಎನಿಸಿಯಲ್ಲಿ .
1947 ರಲ್ಲಿ ಹಸ್ತಪ್ರತಿಗಳು ಸಿಕ್ಕಾಗ ಅದನ್ನು ಪ್ರಪಂಚದ ಅತಿ ಮುಖ್ಯ ಅನ್ವೇಷಣೆಗಳಲ್ಲಿ ಒಂದೆಂದು ಪರಿಗಣಿಸಲಾಯಿತು. ಇದರಲ್ಲಿನ ಮಾಹಿತಿಗೂ ಕ್ರೆೃಸ್ತಧರ್ಮಕ್ಕೂ ತುಂಬಾ ಸಾಮ್ಯತೆ ಇದ್ದುದರಿಂದ ಚರ್ಚಿಗೆ ಇದರಲ್ಲಿ ಆಸಕ್ತಿ ಮೂಡಿ, ಸಿಕ್ಕ ಎಲ್ಲ ಹಸ್ತಪ್ರತಿಗಳನ್ನೂ ಹೀಬ್ರೂನಿಂದ ಇಂಗ್ಲೀಷಿಗೆ ಭಾಷಾಂತರಿಸಲು ತೊಡಗಿದರು. ಈ ಅನುವಾದ ಕೆಲಸ ಇಂದಿಗೂ ನಡೆಯುತ್ತಲೇ ಇದೆ.
ಹೀಗೆ ಸಿಕ್ಕ ಹಸ್ತಪ್ರತಿಗಳಲ್ಲಿ 2/3 ರಷ್ಟು ಬೈಬಲ್ಲಿನ ಹಳೆಯ ಒಡಂಬಡಿಕೆಯಾಗಿವೆ. ಆದರೆ ಇಂದು ವಿಶ್ವದ ಗಮನ ಸೆಳೆದಿರುವುದು ಇನ್ನುಳಿದಿರುವುದು 1/3 ಮಾಹಿತಿ. ಪ್ರಪಂಚದ ಕಣ್ಣಿಗೆ ಅವು ತೀರಾ ಅಪರಿಚಿತ. ಹಸ್ತಪ್ರತಿಗಳ ಈ ಭಾಗ ಹೊಸ ಬೆಳಕನ್ನು ಚೆಲ್ಲಿ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿದೆ. ಇದರಿಂದ ಪವಿತ್ರ ಧರ್ಮಗ್ರಂಥವನ್ನು ಹೊಸ ರೀತಿ ವ್ಯಾಖ್ಯಾನಿಸಲು ಸಾಧ್ಯವಾಗಿದೆ.
ಮೃತ ಸರೋವರದ ಹಸ್ತಪ್ರತಿಗಳ ಎಲ್ಲ ಮಾಹಿತಿ ಕ್ರಿಶ್ಚಿಯನ್ಗೆ ಅನ್ವಯಿಸಿದ್ದೇ ಅಲ್ಲವೇ ಎಂಬುದನ್ನು ಪೇಸಿಯೋಗ್ರಫಿಯ ಆಧಾರದ ಮೇಲೆ ಸಾಬೀತುಪಡಿಸಬಹುದು. ಬೇರಾವ ರೀತಿಯಲ್ಲೂ ಒಂದು ಗ್ರಂಥದ ಅಥವಾ ಬರಹದ ಕಾಲವನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಈ ಕ್ರಮ ಅನ್ವಯಿಸಬಹುದು. ಹೀಗೆ ಅದರ ಕಾಲದ ನಿಷ್ಕರ್ಷೆ ಮಾಡಲು ತೆಗೆದುಕೊಂಡಿದ್ದ ಹಸ್ತಪ್ರತಿಗಳಲ್ಲಿ ಅರೆ-ಮೋಡಿ ಲಿಪಿ ಇದ್ದಿತು. ಇದರಿಂದ ಎಲ್ಲರೂ ಹೇಳುವುದು ಇದು ಸುಮಾರು 140 ಬಿಸಿಇ. ಅಷ್ಟು ಹಳೆಯದು ಎಂದು.
ಧರ್ಮ ನಿಷ್ಠತೆಯ ಗುರು ಮತ್ತು ದುಷ್ಟ ಪೂಜಾರಿ
ಕ್ರಿಶ್ಚಿಯನ್ ಧರ್ಮದೊಂದಿಗೆ ಇದಕ್ಕೆ ಇರುವ ಸಾಮ್ಯತೆಗಳು ಬಹಳ ಕುತೂಹಲಕಾರಿಯಾದದ್ದು . ಬ್ರೆಡ್ ಮತ್ತು ಹೊಸ ಹೆಂಡದ ಪವಿತ್ರ ಊಟ ಮಾಡುವುದು, ಭಯಾನಕವಾದ ನಿರ್ಣಾಯಕ ಅಂತಿಮ ತೀರ್ಪು ಆಗಲಿದೆ ಎಂಬ ಮಾತು, ಹಾಗೂ ಉದ್ಧಾರಕ (ಮೆಸಯ್ಯ)ನ ಆಗಮನದ ಬಗ್ಗೆ ನಿರೀಕ್ಷೆ ಇವೆಲ್ಲ ಅವರಲ್ಲೂ ಇತ್ತು . ಮೊದ ಮೊದಲ ಪೂರ್ವ- ಕ್ರಿಶ್ಚಿಯನ್ನರು ತಮ್ಮನ್ನು ‘ಹಾದಿಯ ಬಣ’(sect of the way) ಎಂದು ಬಣ್ಣಿಸುತ್ತಿದ್ದಂತೆಯೇ ಇವರೂ ತಮ್ಮನ್ನು ‘ಹಾದಿ’ ಎಂದು ಕರೆಯುತ್ತಿದ್ದರು. ಈ ಚರ್ಚೆಗೆ ತುಂಬ ಅಗತ್ಯವಿರುವ ಎರಡು ಪಾತ್ರಗಳು ಈ ಹಸ್ತಪ್ರತಿಗಳಲ್ಲಿವೆ. ಅದರಲ್ಲಿ ಒಬ್ಬ ‘ಧರ್ಮ ನಿಷ್ಠತೆಯ ಗುರು’ (the teacher of righteousness)ಮತ್ತೊಬ್ಬ ‘ದುಷ್ಟ ಪೂಜಾರಿ’ (The wicked priest).
ಗುರು, ಒಬ್ಬ ಕಟ್ಟಾ ಸನ್ಯಾಸಿ. ಅವನನ್ನು ನಾಯಕನಂತೆ ಚಿತ್ರಿಸಿದೆ. ಪ್ರಪಂಚ ಅಂತಿಮ ತೀರ್ಪಿನೊಂದಿಗೆ ಕೊನೆಗೊಳ್ಳಲಿದೆ ಎಂದು ಈತ ಪ್ರಚಾರ ಮಾಡುತ್ತಿದ್ದ . ಅವನ ಅನುಯಾಯಿಗಳನ್ನು ‘ಬೆಳಕಿನ ಪುತ್ರರು’ ಎಂದೂ ಹಾಗೂ ಅವನನ್ನು ಅನುಸರಿಸದವರನ್ನು ‘ಕಗ್ಗತ್ತಲೆಯ ಪುತ್ರರು’ ಎಂದೂ ಕರೆಯುತ್ತಿದ್ದರು. ಇವರು ಜನರನ್ನು ವೈಪರ್ಗಳೆಂದು ಕರೆಯುತ್ತಿದ್ದರು ಹಾಗೂ ಬ್ಯಾಪ್ಟಿಸಂ ಅನುಸರಿಸುತ್ತಿದ್ದರು.
ಕುಮ್ರಾನ್ನಲ್ಲಿ ದೊರೆತ ದಾಖಲೆ ಸುರುಳಿಗಳ ಪ್ರಕಾರ, ಈತನ ಅನುಯಾಯಿಗಳು ಆತನನ್ನು ತೊರೆದು ಹೊಸ ಗುರುವಿಗೆ ಶರಣಾದರು. ಆ ಹೊಸ ಗುರು ಸೂಚಿಸಿದ ಜೀವನ ಶೈಲಿ ಸುಲಭವಾಗಿತ್ತು . ಈ ಹೊಸ ಗುರು ಅನೇಕ ಹೆಸರುಗಳಿಂದ ಪರಿಚಿತನಾಗಿದ್ದಾನೆ. ಅದರಲ್ಲಿ ಒಂದು, ‘ಸುಳ್ಳಿನ ಮನುಷ್ಯ’ಎಂದು. ಇದರ ಗೂಢಾರ್ಥ ಅನೀತಿಯಿಂದ ಜನಿಸಿದವನು ಎಂಬುದೂ ಆಗಬಹುದು. ಇನ್ನೊಂದು ಹೆಸರು ‘ದುಷ್ಟ ಪೂಜಾರಿ’. ದುಷ್ಟ ಏಕೆಂದರೆ ಕಾನೂನನ್ನು ಆತ ಅಲ್ಲಗಳೆದು ಕಂದಾಚಾರಗಳನ್ನು ಪ್ರಶ್ನಿಸಿದ್ದ . ಇವನ ಅನುಯಾಯಿಗಳನ್ನು ‘ಸುಲಭ ಜೀವನ ಹಾಗೂ ಸುಖ ಅರಸುವವರು’ ಎಂದು ಕರೆಯಲಾಯಿತು.
ಇಲ್ಲಿ ಉಲ್ಲೇಖಿಸಿರುವ ಪಾತ್ರಗಳನ್ನು ನಾವು ಬೈಬಲ್ನಲ್ಲಿ ಹುಡುಕುವುದಾದರೆ, ‘ಗುರು’ವಿಗೆ ಯಾರು ಅನ್ವಯವಾಗುತ್ತಾರೆಂದರೆ, ಜಾನ್ ದಿ ಬ್ಯಾಪ್ಟಿಸ್ಟ್. ಹಾಗಿದ್ದ ಮೇಲೆ ದುಷ್ಟ ಪೂಜಾರಿ / ಸುಳ್ಳಿನ ಮನುಷ್ಯ ಎಂಬ ಹೆಸರು ಜೀಸಸ್ ಕ್ರೆೃಸ್ಟ್ಗೆ ಅನ್ವಯಿಸುತ್ತದೆ.
ಇದರ ಪ್ರಕಾರ, ಜೀಸಸ್ನ ಹೊಸ ಕಥೆ ಹೀಗಿದೆ :
ಎನಿಸಿಯರು ನಿರೀಕ್ಷಿಸುತ್ತಿದ್ದ ಇಬ್ಬರು ಉದ್ಧಾರಕರು ಜೀಸಸ್ ಮತ್ತು ಜಾನ್. ಡೇವಿಡ್ನ ವಂಶಸ್ಥನಾದ ಜೀಸಸ್ ರಾಜನ ಹಾಗೆ ಬರುವ ಉದ್ಧಾರಕ (messaiah) ಹಾಗೂ ಲೆವಿ ವಂಶಸ್ಥನಾದ ಜಾನ್ ಪುರೋಹಿತನ ಹಾಗೆ ಬರುವ ಉದ್ಧಾರಕ. ಜಾನ್ ಮತ್ತು ಅವನ ಅನುಯಾಯಿಗಳು ‘ಬೆಳಕಿನ ಪುತ್ರರು’ ನಿರೀಕ್ಷಿಸುತ್ತಿದ್ದುದು ‘ಕಗ್ಗತ್ತಲೆಯ ಪುತ್ರ’ರಿಗೆ ಉಗ್ರ ತೀರ್ಪು ಉಂಟಾಗುತ್ತದೆಂದು. ಇದರಲ್ಲಿ ಆಗ ಜೆರುಸೆಲಂನಲ್ಲಿದ್ದ (ಕಿಟ್ಟಿಂ) ರೋಮನರೂ ಸೇರಿದ್ದಾರೆ. ಎಲ್ಲ ಪಾಪಿಗಳಿಂದ ಮುಕ್ತವಾದ ಬರೀ ಬ್ಯಾಪ್ಟೈಸ್ ಆದ ಯಹೂದಿಗಳಿರುವ ಪ್ರಪಂಚಕ್ಕೆ ಜೀಸಸ್ ರಾಜನಾಗಲೆಂದು ಅವರು ನಿರೀಕ್ಷಿಸುತ್ತಿದ್ದರು. ಜೀಸಸ್ ಈ ಯೋಜನೆಗೆ ಬದ್ಧವಾಗಲಿಲ್ಲ . ಜೀಸಸ್ ( ಹೈ ಪ್ರೀಸ್ಟ್) ಉನ್ನತ ಪುರೋಹಿತನಾಗಲು ಬಯಸಿದ. (ಬೆಳಕು). ನಿಜವಾಗಿಯೂ ಪೌರೋಹಿತ ಕುಟುಂಬದಲ್ಲಿ ಹುಟ್ಟಿದ್ದು ಜಾನ್. ಮಿನೋರ ಮುಂದೆ ನಿಂತು ನಾನೇ ‘ಬೆಳಕು’ ಎಂದು ಹೇಳುತ್ತಿದ್ದ . ಆದರೆ ಜೀಸಸ್ ಹೈ ಪ್ರೀಸ್ಟಿನ ಬಿಳಿಯ ಬಟ್ಟೆಗಳನ್ನು ಧರಿಸಿ, ‘ನಾನೇ ಪ್ರಪಂಚದ ಬೆಳಕು’ ಎಂದು ಘಓಷಿಸಿದ. ಇದರ ಅರ್ಥವೇನೆಂದರೆ, ಯಹೂದಿ ಪೌರೋಹಿತ್ಯ (ಪ್ರೀಸ್ಟ್ ಹುಡ್) ಎಂಬುದೇ ಅನಗತ್ಯ, ‘ದೇವರ’ ದೃಷ್ಟಿಯಲ್ಲಿ ಪ್ರತಿಯಾಬ್ಬ ಯಹೂದಿಯೂ ಒಬ್ಬ ಪುರೋಹಿತನಾಗಬಹುದು ಎಂದು. ಅವನ ಈ ‘ಅವಿಧೇಯ’ ಕೆಲಸದಿಂದಾಗಿ ಅವನನ್ನು ಪುರೋಹಿತ- ವಿರೋಧಿಎಂಬ ಅರ್ಥದಲ್ಲಿ ದುಷ್ಟ ಪುರೋಹಿತ ಎಂದು ಕರೆಯಲಾಯಿತು.
ಮುಖಪುಟ / ಲೋಕೋಭಿನ್ನರುಚಿ