ಕರ್ನಾಟಕ ವಿಶ್ವವಿದ್ಯಾನಿಲಯದ 52ನೇ ಘಟಿಕೋತ್ಸವ
ಧಾರವಾಡ : ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಯಲದ 52ನೇ ಘಟಕೋತ್ಸವ ಸಮಾರಂಭ ಗುರುವಾರ ನೆರವೇರಿತು. ರಾಜ್ಯದ ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಅವರು ಘಟಿಕೋತ್ಸವದಲ್ಲಿ ಪಿಎಚ್ಡಿ ಹಾಗೂ ಇನ್ನಿತರ ಪದವಿಗಳನ್ನು ಪ್ರದಾನ ಮಾಡಿದರು.
ಗಾಂಧೀ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ನರೇಂದ್ರ ಕುಮಾರ್ ಜೈನ್ ಘಟಿಕೋತ್ಸವ ಭಾಷಣ ಮಾಡಿದರು. ಇಂದು ಕಾಲೇಜು, ವಿಶ್ವವಿದ್ಯಾಲಯಗಳು ಸ್ವೇಚ್ಛಾವೃತ್ತಿಯಿಂದ ವರ್ತಿಸುವ ಕೆಲವು ವಿದ್ಯಾರ್ಥಿಗಳ ರಾಜಕೀಯ ಜೀವನಕ್ಕೆ ಬುನಾದಿ ಹಾಕಿಕೊಡುವ ಕೇಂದ್ರವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಕಾಲೇಜುಗಳಲ್ಲಿ ಹೆಚ್ಚುತ್ತಿರುವ ರ್ಯಾಂಗಿಂಗ್ ಬಗ್ಗೆ ಪ್ರಸ್ತಾಪಿಸಿದ ಅವರು, ಇಂತಹ ಪಿಡುಗುಗಳನ್ನು ಬಗ್ಗು ಬಡಿಯಲು ಕಾಯಿದೆಗಳನ್ನು ಬಲಪಡಿಸಬೇಕು ಎಂದರು. ಎಲ್ಲ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಕಾಯ್ದುಕೊಳ್ಳಲು ಸರಕಾರ ಗಮನಹರಿಸಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಿಗೂ ಇಂಟರ್ನೆಟ್ ಸೌಲಭ್ಯ ಒದಗಿಸಲು ಯೋಜಿಸಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕ್ರಮವನ್ನು ಅವರು ಮುಕ್ತ ಕಂಠದಿಂದ ಪ್ರಸಂಸಿಸಿದರು.
ಈ ಸಾಲಿನಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪದವಿ ಪಡೆದಿದ್ದಾರೆ. ಈ ಪೈಕಿ ಗುರುವಾರ 260 ವಿದ್ಯಾರ್ಥಿಗಳು ಪ್ರೋ ಚಾನ್ಸಲರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಪರಮೇಶ್ವರ್ ಅವರಿಂದ ಪ್ರಶಸ್ತಿ ಪತ್ರ ಪಡೆದರು.
(ಪಿ.ಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...