ರಾಜ್ಯದ ಆಡಳಿತದ ಚುಕ್ಕಾಣಿ ಹೈಟೆಕ್ ಕಳ್ಳರ ಕೈನಲ್ಲಿ - ದೇವೇಗೌಡ
ಶಿರಾ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಎಸ್.ಎಂ. ಕೃಷ್ಣ ಅವರಲ್ಲ .. ಕಾಂಗ್ರೆಸ್ ಪಕ್ಷವೂ ಅಲ್ಲ .. ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಹೈಟೆಕ್ ಕಳ್ಳರ ಗುಂಪು!
ಜಾತ್ಯತೀತ ಜನತಾದಳ ಬುಧವಾರ ತುಮಕೂರು ಜಿಲ್ಲೆಯ ಶಿರಾದಲ್ಲಿ ಏರ್ಪಡಿಸಿದ್ದ ರೈತರ ಬೃಹತ್ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ- ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು ಹೀಗೆ.
ನನಗೆ ಅಧಿಕಾರ ಬೇಡ. ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವ ಹುಚ್ಚೂ ನನಗಿಲ್ಲ . ರಾಜ್ಯ ಹಾಗೂ ಕೇಂದ್ರದಲ್ಲಿರುವ ಭ್ರಷ್ಟ ಸರ್ಕಾರಗಳು ತೊಲಗಬೇಕೆನ್ನುವುದೇ ನನ್ನ ಹೋರಾಟದ ಉದ್ದೇಶ ಎಂದು ದೇವೇಗೌಡ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಸಮಾನದೂರದಲ್ಲಿಡುವಂತೆ ಗೌಡ ಜನತೆಗೆ ಕರೆ ನೀಡಿದರು.
ರೈತ ಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದು ನನ್ನ ಕನಸು. ಬೇಜವಾಬ್ದಾರಿ ಮುಖ್ಯಮಂತ್ರಿಯ ಕೈಯಲ್ಲಿ ಅಧಿಕಾರ ಸಿಲುಕಿ ರೈತರು ನೊಂದಿದ್ದಾರೆ. 150 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ತಣ್ಣಗೆ ಕೂತಿದೆ ಎಂದು ಮಾಜಿ ಪ್ರಧಾನಿ ಆರೋಪಿಸಿದರು. ಪ್ರಧಾನಿಯಾಗಿ ದೇವೇಗೌಡ ಕೆಂಪುಕೋಟೆ ಮೇಲೆ ಹಾರಿಸಿದ್ದು ರಾಷ್ಟ್ರಧ್ವಜವಲ್ಲ, ಅದು ರೈತರ ಹಾಗೂ ಬಡವರ ಧ್ವಜ. ಅದಕ್ಕೀಗ ಅಪಾಯ ಒದಗಿದೆ. ಆದ್ದರಿಂದ ರಾಜ್ಯದಿಂದಲೇ ದೇವೇಗೌಡರ ನೇತೃತ್ವದಲ್ಲಿ ವೇದಿಕೆ ಸಿದ್ಧಪಡಿಸುವುದು ಅನಿವಾರ್ಯ ಎಂದು ಅವರು ಬಣ್ಣಿಸಿಕೊಂಡರು.
ಮಾಜಿ ಸಚಿವರಾದ ಬಿ. ಸತ್ಯನಾರಾಯಣ, ಡಿ.ಮಂಜುನಾಥ್, ಬಿ.ಟಿ. ಲಲಿತಾ ನಾಯಕ್, ತಿಪ್ಪೇಸ್ವಾಮಿ, ವಿಧಾನ ಪರಿಷತ್ ಉಪ ನಾಯಕ ಬಸವರಾಜ ಬೊಮ್ಮಾಯಿ, ಡಿ. ನಾಗರಾಜಯ್ಯ, ಮಾಜಿ ಶಾಸಕ ಗಂಗಹನುಮಯ್ಯ, ನಂಜಾಮರಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications