ಬೆಂಗಳೂರು ಮಹಾನಗರ ಪಾಲಿಕೆ ಸದಸ್ವನ ಮೇಲೆ ಹಲ್ಲೆ
ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ರವೀಂದ್ರ ಅವರ ಮೇಲೆ ಶನಿವಾರ ಹಾಡುಹಗಲೇ ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ರವೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಗಡಿರೋಡ್ ಪೊಲೀಸರು ತಿಳಿಸಿದ್ದಾರೆ.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ದುಷ್ಕರ್ಮಿಗಳ ತಂಡದಲ್ಲಿ ಎಷ್ಟು ಮಂದಿ ಇದ್ದರೆಂದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಇಬ್ಬರು ಅಥವಾ ಮೂವರ ತಂಡ ಈ ಕುಕೃತ್ಯ ಎಸಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಶನಿವಾರ ಹಾಡು ಹಗಲೇ ನಗರ ಪಾಲಿಕೆ ಸದಸ್ಯರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಚ್ಚಿನಿಂದ ಅವರ ಮೇಲೆ ಹಲ್ಲೆ ನಡೆಸಿದರು, ಇದನ್ನು ತಡೆಯಲು ಯತ್ನಿಸಿದ ಪಾಲಿಕೆ ಸದಸ್ಯರ ಪತ್ನಿಯ ಕೈಬೆರಳಿಗೂ ಗಾಯಗಳಾಗಿವೆ. ರವೀಂದ್ರ ಅವರ ಕುತ್ತಿಗೆ ಭಾಗದಲ್ಲಿ ತೀವ್ರವಾದ ಗಾಯವಾಗಿದೆ.
ಮಾಗಡಿ ರಸ್ತೆ ಬಳಿಯ ಬನಶಂಕರಿ ದೇವಾಲಯದ ಪಕ್ಕದಲ್ಲಿ ಮಾಂಸದ ಹೋಟೆಲ್ ತೆರೆಯಲು ಅವಕಾಶ ನಿರಾಕರಿಸಿದ್ದೇ, ಪಾಲಿಕೆ ಸದಸ್ಯರ ಮೇಲೆ ಹಲ್ಲೆ ನಡೆದಿರುವುದಕ್ಕೆ ಕಾರಣ ಎಂದು ತಿಳಿದುಬಂದಿದೆ. ರವೀಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ಪಿ.ಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications