ಅಡಿಕೆಗೆ ಅಂಟಿಕೊಂಡ ಬಿಜೆಪಿ
*ಇನ್ಫೋ ಇನ್ಸೈಟ್
ಒಗ್ಗಟ್ಟು ಮತ್ತು ಒಂದಷ್ಟು ಜನರ ಗುಂಪು ಇದ್ದಲ್ಲೆಲ್ಲ ರಾಜಕೀಯ ಮೂಗು ತೂರಿಸಿ ಓಟು ಕೇಳುತ್ತದೆ. ಉದಾಹರಣೆಗೆ ದಕ್ಷಿಣ ಕನ್ನಡದ ಅಡಿಕೆ ವಲಯವನ್ನು ನೋಡಿ. ಅಡಿಕೆ ಧಾರಣೆ ಕುಸಿದು, ರೈತರು ಗತ್ಯಂತರವಿಲ್ಲದೆ ಒಗ್ಗಟ್ಟಾಗಬೇಕಾಗಿ ಬಂದದ್ದು ಹಳೇ ಮಾತು. ಮಂಡಿ ವರ್ತಕರ ಸಂಘ, ಬೆಳೆಗಾರರ ಸಂಘ ಮತ್ತೇನೇನೋ ಸಂಘಗಳು ಹುಟ್ಟಿಕೊಂಡು, ಸೋತ ಅಡಿಕೆಯನ್ನು ಮೇಲೆತ್ತಲು ಕರಾವಳಿ ಮತ್ತು ಮಲೆನಾಡಿನಲ್ಲಿ ಶತಾಯ ಗತಾಯ ಪ್ರಯತ್ನಗಳು ನಡೆಯುತ್ತಲೇ ಇವೆ. ಅಲ್ಲಿಗೀಗ ಮೂಗು ತೂರಿಸಿಸಿದೆ ಬಿಜೆಪಿ.
ಒಂದು ಕಾಲವಿತ್ತು. ರೈತರ ಅಂಗಳದಲ್ಲಿ ರಾಶಿ ಬಿದ್ದ ಅಡಿಕೆ ನೋಡಿ ಆ ರೈತನ ಶ್ರೀಮಂತಿಕೆ ಲೆಕ್ಕ ಹಾಕಿ ಭತ್ತ ಬೆಳೆಯುವ ರೈತ ಹೊಟ್ಟೆಕಿಚ್ಚು ಪಡುತ್ತಿದ್ದ. ಮನೆಗೆ ಹೋದವನೇ ತನ್ನ ಹೊಲದಲ್ಲಿ ಅಡಿಕೆ ಸಸಿ ಹಾಕುವ ಪ್ಲಾನ್ ರೆಡಿ ಮಾಡುತ್ತಿದ್ದ. ಆದರೆ ಕಾಲ ನಿಂತಲ್ಲೇ ನಿಲ್ಲಲಿಲ್ಲ. ಜಾಗತೀಕರಣವೋ, ಅದೃಷ್ಟವೋ ಸುಡುಗಾಡೋ.. ಅಡಿಕೆ ಆಕಾಶದಿಂದ ಧಸಕ್ಕನೆ ಪಾತಾಳಕ್ಕಿಳಿಯಿತು. ಸಾಂಕ್ರಾಮಿಕ ಕೊಳೆ ರೋಗ ಬೇರೆ ಜೊತೆಯಾಗಿ ವರ್ಷಕ್ಕೆ 100 ಮರಗಳು ತೋಟದಲ್ಲಿ ನಿಡಿದಾಗಿ ಮಲಗಿದವು.
ಬಿಜೆಪಿಗಳ ಮಂಗಳೂರು ಚಲೋ ರ್ಯಾಲಿ
ಕ್ಯಾಂಪ್ಕೋ ಸಂಸ್ಥೆ, ವರ್ತಕರ ಮತ್ತು ಬೆಳೆಗಾರರ ಆಗ್ರಹಗಳಿಂದ ಅಡಿಕೆಯ ಬೆಲೆ ರೈತರಿಗೆ ತುತ್ತು ನೀಡುವಷ್ಟು ಮೇಲೆ ಬರುತ್ತಿದೆ. ಈಗ ಕರಾವಳಿಯ ಅಡಿಕೆ ವಲಯದ ಹೋರಾಟಕ್ಕೆ ರಾಜಕೀಯ ನಾಯಕನಾಗಿ ಬಿಜೆಪಿ ಗುರ್ತಿಸಿಕೊಳ್ಳುತ್ತಿದೆ.
ಅಡಿಕೆ ರೈತರು ಹೆಚ್ಚಾಗಿರುವ ಸುಳ್ಯದಲ್ಲಿ ಮೊದಲ ಬಾರಿ ರೈತರು ಬೀದಿಗಳಿದು ಜಾಥಾ ನಡೆಸಿದ್ದಾರೆ. ಗುರುವಾರ(ಡಿ.13) ಆರಂಭವಾದ ರ್ಯಾಲಿಯ ನೇತೃತ್ವ ವಹಿಸಿದ ಹೆಮ್ಮೆ ರಾಜ್ಯ ಪ್ರತಿಪಕ್ಷದ ಉಪನಾಯಕ (ಬಿಜೆಪಿ) ಡಿ.ವಿ. ಸದಾನಂದ ಗೌಡರದು. ಮೂರು ದಿನಗಳ ಮಂಗಳೂರು ಚಲೋ ರ್ಯಾಲಿ. ಆರು ಸಾವಿರ ರೈತರ ಬೃಹತ್ ಜಾಥಾ ಅದು. ವರ್ಷಗಳ ಕಾಲ ನಡೆಯುತ್ತಿರುವ ಶೋಷಿತ ಅಡಿಕೆ ಬೆಳೆಗಾರರ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಂಡಿದೆ ಎಂದು ಸದಾನಂದರು ಭಾಷಣ ಆರಂಭಿಸಿದರು.
ಇದು ಪ್ಯೂರ್ ರೈತರ ಹೋರಾಟ. ಕೇಂದ್ರದ ಪರವಾಗಿಯಾಗಲಿ, ರಾಜ್ಯ ಸರಕಾರದ ವಿರುದ್ಧವಾಗಲೀ ಅಲ್ಲ ಎಂದು ಗೌಡರು ಸಾರ್ವಜನಿಕ ಬಯಲು ಭಾಷಣದಲ್ಲಿ ಕಿರುಚಿದರು. ಬಿಜೆಪಿ ಹೀಗೆ ಹೇಳಲು ಕಾರಣವಿದೆ. ‘ಅಡಿಕೆ ಬೆಳೆ ಕುಸಿದಿರುವುದು ವಿಶ್ವ ವ್ಯಾಪಾರ ಒಪ್ಪಂದದಿಂದಾಗಿ. ಅದಕ್ಕೆ ಕೇಂದ್ರ ಸರಕಾರವೇ ಕಾರಣ’ ಎಂಬ ಬೆರಳೆಣಿಕೆಯ ‘ಬುದ್ಧಿಜೀವಿ ಅಡಿಕೆ ಬೆಳೆಗಾರರ’ಮಾತು ನಿಜ ಎಂಬುದು ಬಿಜೆಪಿಗೂ ಗೊತ್ತಿದೆ.
ಮತಕ್ಕೆ ಬೇಕಿದ್ದ ವಿಷ್ಯಗಳೆಲ್ಲಾ ಕಾಂಗ್ರೆಸ್ ಕೈಲಿದೆ
ಕರಾವಳಿಯಲ್ಲಿ ಪ್ರತಿ ವರ್ಷವೂ ಶಾಸಕ ರಮಾನಾಥ ರೈ ಅಲ್ಪ ಸಂಖ್ಯಾತ ಕೋಮಿನವರನ್ನು, ಕೋಮುವಾದವನ್ನು , ಉಳ್ಳಾಲ ಕಡಲ್ಕೊರೆತವನ್ನು ಮತ್ತೆ ಪುರುಸೊತ್ತಾದಾಗ ಮೀನುಗಾರಿಕೆಯನ್ನು ತಬ್ಬಿಕೊಂಡು ರಾಜಕೀಯದಲ್ಲಿ ಮೇಲೇರುತ್ತಿದ್ದರೆ, ಬಿಜೆಪಿಗಳು ರಾಮನಾಮ ಕೋಟಿ ಜಪದ ಹೊರತಾಗಿ ಕೈಗೆ ಬೇರೇನೂ ಸಿಗದೆ ಸುಮ್ಮನಿದ್ದಾರೆ. ವಾಜಪೇಯಿ ಸರಕಾರ ಬರುವ ಮುಂಚೆ ಪರಿಸರವಾದವನ್ನು ನೆಚ್ಚಿಕೊಂಡಿದ್ದ ಕರಾವಳಿ ಬಿಜೆಪಿಗಳು ಕೇಂದ್ರದ ಸ್ವದೇಶಿ ನೀತಿಯ ರಂಗಿನಿಂದ ನಿರುದ್ಯೋಗಿಗಳಾಗಿದ್ದಾರೆ. ಕೊನೆಗೆ ಅಡಿಕೆಯನ್ನೇ ಕೈಗೆತ್ತಿಕೊಂಡಿದ್ದಾರೆ.
ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ ಡಿಸೆಂಬರ್ 13ರಂದು ರ್ಯಾಲಿ ಆರಂಭವಾಯ್ತು. ಪಕ್ಕಾ ಪ್ರಾದೇಶಿಕ ಶೈಲಿಯಲ್ಲಿ ರೈತರೇ ತಾಂಬೂಲ ತಟ್ಟೆಯಲ್ಲಿ ರಣವೀಳ್ಯ ನೀಡುವ ಮೂಲಕ ರ್ಯಾಲಿ ಉದ್ಘಾಟಿಸಲಾಯ್ತು. ಸರಕಾರ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು, ವಹಿವಾಟಿನ ಮೇಲಿರುವ ಶೇ 6 ರ ತೆರಿಗೆ ಮನ್ನಾ ಮಾಡಬೇಕೆಂಬ ಪ್ರಮುಖ ಬೇಡಿಕೆಗಳೊಂದಿಗೆ ಮಂಗಳೂರು ಚಲೋ ರ್ಯಾಲಿ ಆರಂಭವಾಗಿದೆ. ಡಿಸೆಂಬರ್ 21ರಂದು ಮುಖ್ಯಮಂತ್ರಿಗಳ ಜೊತೆಗೆ ಅಡಿಕೆ ಬೆಳೆಗಾರರು ಚರ್ಚೆ ನಡೆಸಲಿದ್ದಾರೆ.
ಮುಖಪುಟ / ಲೋಕೋಭಿನ್ನರುಚಿ