ಬಿಗಿ ಪೊಲೀಸ್ ಭದ್ರತೆ! ಸಾಫ್ಟ್ವೇರ್ ಕಂಪನಿಗಳಿಗೆ ಇರುಸುಮುರುಸು
ಬೆಂಗಳೂರು : ನಗರದಲ್ಲಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ಸಾಫ್ಟ್ವೇರ್ ಸಂಸ್ಥೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿ.ವಿ.ಭಾಸ್ಕರ್ ತಿಳಿಸಿದ್ದಾರೆ.
ಡಿಸೆಂಬರ್ 13 ರ ಗುರುವಾರ ದೆಹಲಿಯಲ್ಲಿನ ಸಂಸತ್ ಭವನದ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ವೈಟ್ಫೀಲ್ಡ್ನಲ್ಲಿನ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್, ರಾಜ್ಯದ ಜಲಾಶಯಗಳು, ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನೆಗಳು, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ ಹೆಚ್ಚಿನ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಭಾಸ್ಕರ್ ಹೇಳಿದರು.
ಬೆಂಗಳೂರಿನಲ್ಲಿನ ಎಲ್ಲ ಸಾಫ್ಟ್ವೇರ್ ಕಂಪನಿಗಳು ಹಾಗೂ ಅವುಗಳ ಸಿಇಓಗಳಿಗೆ ರಕ್ಷಣೆ ಒದಗಿಸಲಾಗಿದೆ. ಪೊಲೀಸ್ ರಕ್ಷಣೆ ಕೆಲವು ಸಾಫ್ಟ್ವೇರ್ ಕಂಪನಿಗಳಿಗೆ ಇರುಸುಮುರುಸು ತಂದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆ ಅನಿವಾರ್ಯವಾಗಿದೆ. ರಾಜ್ಯಪಾಲೆ ವಿ.ಎಸ್.ರಮಾದೇವಿ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ವಿರೋಧ ಪಕ್ಷಗಳು ಮುಖಂಡರು ಸೇರಿದಂತೆ ಎಲ್ಲ ವಿವಿಐಪಿಗಳಿಗೂ ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ.
ಪೊಲೀಸರಿಗೆ ನೀಡಿದ್ದ ಎಲ್ಲ ರಜೆಗಳನ್ನು ರದ್ದು ಪಡಿಸಲಾಗಿದ್ದು , ರಜೆಯಲ್ಲಿರುವ ಪೊಲೀಸರಿಗೂ ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಭಾಸ್ಕರ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...