ಕುದುರೆಮುಖ : ಕೇಂದ್ರದ ನಿರ್ಧಾರ ನಾವು ಒಪ್ಪಬೇಕಷ್ಟೇ - ಸಚಿವ
ಬೆಂಗಳೂರು : ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ 5 ವರ್ಷಗಳ ಕಾಲ ಗಣಿಗಾರಿಕೆ ನಡೆಸಲು ಗುತ್ತಿಗೆ ಅವಧಿಯನ್ನು ಮುಂದುವರಿಸುವಂತೆ ರಾಜ್ಯ ಸರಕಾರ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರಕಾರವು ರಾಜ್ಯದ ಶಿಫಾರಸನ್ನು ಕಡೆಗಣಿಸಿ, 20 ವರ್ಷಗಳ ಅವಧಿಗೆ ಗುತ್ತಿಗೆ ಮುಂದುವರಿಸಲು ಉದ್ದೇಶಿಸಿರುವುದಾಗಿ ಗೊತ್ತಾಗಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ವಿ. ಮುನಿಯಪ್ಪ ಸೋಮವಾರ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಒಂದೊಮ್ಮೆ ಕೇಂದ್ರ ಸರಕಾರವು ಕುದುರೆಮುಖ ಗಣಿಗಾರಿಕೆ ಗುತ್ತಿಗೆ ಅವಧಿಯನ್ನು 20 ವರ್ಷಗಳ ಕಾಲ ವಿಸ್ತರಿಸಿಸಲು ನಿರ್ಧರಿಸದರೆ, ಅದನ್ನು ಒಪ್ಪಿಕೊಳ್ಳದೆ ರಾಜ್ಯಕ್ಕೆ ಅನ್ಯ ಮಾರ್ಗವೇ ಇಲ್ಲ ಎಂದರು. 1998ರಲ್ಲಿ ಅಂದಿನ ರಾಜ್ಯ ಸರಕಾರ 20 ವರ್ಷದ ಅವಧಿಗೆ ಗುತ್ತಿಗೆ ವಿಸ್ತರಣೆಗೆ ಶಿಫಾರಸು ಮಾಡಿತ್ತು. ಅದನ್ನೇ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದೆ ಎಂದು ಅವರು ಹೇಳಿದರು.
ಗುತ್ತಿಗೆ ಅವಧಿ ಪೂರ್ಣಗೊಂಡಿದ್ದ ಕುದುರೆಮುಖ ಕಂಪೆನಿಗೆ ಗಣಿಗಾರಿಕೆ ಅವಧಿ ವಿಸ್ತರಿಸುವುದನ್ನು ವಿರೋಧಿಸಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ನಿವಾಸಿಗಳು, ಸಾಹಿತಿಗಳು, ಮಠಾಧೀಶರು, ಪರಿಸರವಾದಿಗಳು ಹಾಗೂ ಗಣ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಚಳವಳಿ ನಡೆಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...