ಉಡುಪಿಯಲ್ಲಿ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರ?
ಉಡುಪಿ : ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಅವರೆಲ್ಲರನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಲಿತಕಲಾ ಅಕಾಡೆಮಿಯ ಪ್ರಾದೇಶಿ ಕೇಂದ್ರವನ್ನು ಜಿಲ್ಲೆಯಲ್ಲಿ ತೆರೆಯುವ ಯೋಚನೆಯಿದೆ ಎಂದು ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪೀಟರ್ ಲೂಯಿಸ್ ಹೇಳಿದ್ದಾರೆ.
ಅವರು ನಗರದ ಚಿತ್ರಕಲಾ ಶಾಲೆಯ ಅಧ್ಯಾಪಕ ಸತ್ಯಶಂಕರ ರಾವ್ ಅವರು ರಚಿಸಿದ ಭಾವಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ, ಉಡುಪಿಯಲ್ಲಿ ಅನೇಕ ಮಂದಿ ಸೃಜನಶೀಲ ಕಲಾವಿದರಿದ್ದಾರೆ. ಆದರೆ, ಕಲಾ ಶಾಲೆಗಳಾಗಲಿ, ಚಿತ್ರಕಲಾ ಕಾಲೇಜುಗಳಾಗಲಿ ಇಲ್ಲಿಲ್ಲ. ಚಿತ್ರಕಲಾ ಮಂದಿರದವರು ಸ್ಥಳ ಒದಗಿಸಿದಲ್ಲಿ , ಗ್ರಂಥಾಲಯವೂ ಸೇರಿದಂತೆ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕಕೇಂದ್ರವನ್ನು ಉಡುಪಿಯಲ್ಲಿ ತೆರೆಯಬಹುದು ಎಂದರು.
ಚಿತ್ರಕಲಾ ಮಂದಿರದ ನಿರ್ದೇಶಕಿ ಪ್ರಮಿಳಾ ಚೋಳಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಮೋಹನ್ ಕಡಬ ಮತ್ತು ಮೋಹನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...