ಶಿವಲಿಂಗಕ್ಕೆ ಸಗಣಿ ; ಕೊಡಗಿನ ಮಡಿಕೇರಿ, ಶುಂಠಿಕೊಪ್ಪ ಉದ್ವಿಗ್ನ
ಕೊಡಗು : ದೇವಸ್ಥಾನವನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಶುಂಠಿಕೊಪ್ಪಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಲೂರಿನ ಸತ್ಯ ಹರಿಶ್ಚಂದ್ರ ದೇವಸ್ಥಾನದ ಆವರಣದಲ್ಲಿರುವ ಶಿವಲಿಂಗ ದೇವರ ವಿಗ್ರಹಕ್ಕೆ ಒಂದು ಕೋಮಿನ ಕಿಡಿಗೇಡಿಗಳು ಇತ್ತೀಚೆಗೆ ಸಗಣಿ ಎಸೆದು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಈ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಶಿವಲಿಂಗದ ಮೇಲೆ ಸಗಣಿ ಎಸೆದ ಬಗ್ಗೆ ದೇವಸ್ಥಾನ ಸಮಿತಿಯ ಸದಸ್ಯ ಹರೀಶ್ ಕಾರ್ಯಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಅಹಿತಕರ ಘಟನೆಯ ಸಂಬಂಧ ನಾಲ್ವರು ಕಿಡಿಗೇಡಿಗಳನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.
ಗಲಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರ ಕಿಟಕಿ ಗಾಜುಗಳನ್ನು ದುಷ್ಕರ್ಮಿಗಳು ಚೂರು ಚೂರು ಮಾಡಿದ್ದಾರೆ. ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಪ್ರದೇಶಗಳಲ್ಲಿ ಪೊಲೀಸ್ ಕಾಯ್ದೆ 144 ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಿವಿಲ್ ಪೊಲೀಸ್, ಕೆಎಸ್ಆರ್ಪಿ ಹಾಗೂ ಸಿಎಆರ್ ಫ್ಲಟೂನ್ಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಯತ್ನದಲ್ಲಿ ತೊಡಗಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಖುದ್ದು ಹಾಜರಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರಮಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...