ಅದ್ಧೂರಿಯ ಮದುವೆಗೆ ಮಂಗಳಹಾಡಲು ಮುಖ್ಯಮಂತ್ರಿ ಕರೆ
ಬಾದಾಮಿ: ಹೆಣ್ಣು ಹೆತ್ತ ತಂದೆ ತಾಯಿಯರಿಗೆ ಹೊರೆಯಾಗುವ ಹಾಗೂ ದುಂದುಗಾರಿಕೆಯ ಅದ್ಧೂರಿಯ ಮದುವೆಗಳಿಗೆ ಮಂಗಳ ಹಾಡುವಂತೆ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕರೆ ನೀಡಿದ್ದಾರೆ. ವರದಕ್ಷಿಣೆ ಭೂತವನ್ನು ತೊಡೆದೋಡಿಸಲು ಮತ್ತು ದುಂದುವೆಚ್ಚ ತಪ್ಪಿಸಲು ಸಾಮೂಹಿಕ ವಿವಾಹಗಳು ದಾರಿದೀಪವಾಗಿವೇ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 8ರ ಶನಿವಾರ ಸರ್ವಧರ್ಮ ಸಮನ್ವಯ ಸಮಿತಿ ಇಲ್ಲಿ ಏರ್ಪಡಿಸಿದ್ದ ಸಾವಿರದ ಒಂದು ಜೋಡಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ನವವಧೂವರರನ್ನು ಹರಸಿ ಮಾತನಾಡುತ್ತಿದ್ದ ಅವರು, ಮದುವೆ ಎಂದರೆ ಹೆಣ್ಣಿನ ತಂದೆ ತಾಯಿಗಳನ್ನು ಸಾಲದ ಶೂಲಕ್ಕೆ ಏರಿಸುವ ವಿಧಿ ಎನ್ನುವಂತಾಗಿದೆ ಎಂದರು.
ಸಾಮೂಹಿಕ ಮತ್ತು ಸರಳ ವಿವಾಹಗಳಿಗೆ ಸಮಾಜದ ಕಣ್ಣು ತೆರೆಸುವ ಸಾಮರ್ಥ್ಯ ಇದೆ. ಎಲ್ಲ ಧರ್ಮದ ಧಾರ್ಮಿಕ ನಾಯಕರು ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಬೇಕು ಎಂದರು. 1001 ಜೋಡಿ ಉಚಿತ ವಿವಾಹ ಏರ್ಪಡಿಸಿದ್ದ ಸರ್ವಧರ್ಮ ಸಮನ್ವಯ ಸಮಿತಿಯನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ಖಾತೆ ರಾಜ್ಯ ಸಚಿವ ಆರ್.ಬಿ. ತಿಮ್ಮಾಪೂರ್ ಅವರು ‘ಕಂಕಣ’ ಎಂಬ ಸ್ಮರಣ ಸಂಚಿಕೆಯ ಬಿಡುಗಡೆ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ವಧೂವರಿಗೆ ಶುಭ ಹಾರೈಸಿದರು.
ನಗರಾಭಿವೃದ್ಧಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರು ಮಾರ್ಗದರ್ಶನದಲ್ಲಿ ಸರ್ವಧರ್ಮ ಸಮನ್ವಯ ಸಮಿತಿ ಈ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಿತ್ತು. ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications