ಚಿತ್ತಾಪುರ ತಾಲ್ಲೂಕು ದಂಡಗುಂಡ ಗ್ರಾಮದ ಬಸ್ಸಿಗೆ ಭಾನುವಾರ ರಜೆ
ಚಿತ್ತಾಪುರ : ತಾಲ್ಲೂಕಿನ ದಂಡಗುಂಡ ಗ್ರಾಮಕ್ಕೆ ಓಡಿಸುವ ರೂಟ್ಬಸ್ಗೆ ಭಾನುವಾರ ರಜೆ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಂದಿ ಹಾಡಿದೆ.
ಭಾನುವಾರ ಬಂತೆಂದರೆ ದಂಡಗುಂಡ ಗ್ರಾಮಸ್ಥರಿಗೆ ಕಾಲೇ ಮೋಟಾರು. ಚಿತ್ತಾಪುರದಿಂದ 23 ಕಿಮೀ ದೂರದಲ್ಲಿರುವ ದಂಡಗುಂಡ ಗ್ರಾಮ ಈ ಭಾಗದ ಪ್ರಸಿದ್ಧ ಯಾತ್ರಾಸ್ಥಳವೂ ಹೌದು. ದಂಡಗುಂಡದ ಬಸವೇಶ್ವರ ಸ್ವಾಮಿಗೆ ತಾಲ್ಲೂಕಿನಲ್ಲಿ ಸಾವಿರಾರು ಭಕ್ತರಿದ್ದಾರೆ. ಗ್ರಾಮದ ಜನಸಂಖ್ಯೆ 2 ಸಾವಿರಕ್ಕೂ ಹೆಚ್ಚು .
ಸುತ್ತುಮುತ್ತಲಿನ ಅಳ್ಳಳ್ಳಿ ಹಾಗೂ ಸಾತನೂರು ಗ್ರಾಮಸ್ಥರಿಗೂ ಈ ಬಸ್ಸು ಸಂಪರ್ಕದ ಕೊಂಡಿಯಾಗಿದೆ. ವಾರಪೂರ್ತಿ ಸಂಚರಿಸುವ ಬಸ್ಸಿಗೆ ಭಾನುವಾರ ಮಾತ್ರ ರಜೆ. ಈ ರಜೆಗೆ ಸಂಸ್ಥೆ ನೀಡುವ ಕಾರಣ- ಆದಾಯದ ಕೊರತೆ. ಭಾನುವಾರ ಕೂಡ ಬಸ್ ಸಂಚಾರ ಆರಂಭಿಸಬೇಕು. ಇಲ್ಲದಿದ್ದರೆ ಡಿಪೊಗೆ ಮುತ್ತಿಗೆ ಹಾಕಲಾಗುವುದು ಎನ್ನುವುದು ಗ್ರಾಮಸ್ಥರ ಬೆದರಿಕೆ. ಅಂದಹಾಗೆ, ಈ ಸಂಪ್ರದಾಯ ಬೇರೆಡೆಗಳಲ್ಲೂ ಜಾರಿಯಲ್ಲಿದೆಯೋ ಅನ್ನುವುದು ತಿಳಿದುಬಂದಿಲ್ಲ .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...