ಬೆಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಾಪಕ ಬೆದರಿಕೆ ಕರೆಗಳು
ಬೆಂಗಳೂರು : ಬಾಂಬ್ ಇಡಲಾಗಿದೆ, ಹೈಜಾಕ್ ಭಯವಿದೆ ಎಂಬಿತ್ಯಾದಿ ಬೆದರಿಕೆ ಫೋನ್ ಕರೆಗಳು ನಗರದ ವಿಮಾನ ನಿಲ್ದಾಣಕ್ಕೆ ಬರುತ್ತಿರುವುದು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕರೆ ಪತ್ತೆ ಉಪಕರಣವನ್ನು ಸಂಬಂಧಪಟ ಅಧಿಕಾರಿಗಳು ಅಳವಡಿಸಬೇಕು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕೇಳಿಕೊಂಡಿದೆ.
ಹದಿನೈದು ದಿನಗಳ ಹಿಂದೆ ವಿದ್ಯಾರ್ಥಿಯಾಬ್ಬ ಸೆಲ್ ಫೋನ್ ಮೂಲಕ ಜೆಟ್ ಏರ್ವೇಸ್ಗೆ ಕರೆ ಮಾಡಿ, ಬೆಂಗಳೂರಿನಿಂದ ಹಾರುವ ವಿಮಾನಗಳಲ್ಲಿ ಬಾಂಬ್ ಇದೆ ಎಂದು ಹುಡುಗಾಟಿಕೆ ಮಾಡಿದ್ದ. ಕರೆ ಪತ್ತೆ ಉಪಕರಣ ಇದ್ದುದರಿಂದ, ಕೆಲವೇ ಗಂಟೆಗಳಲ್ಲಿ ಅವನನ್ನು ಬಂಧಿಸಲು ಸಾಧ್ಯವಾಯಿತು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಂಟ್ ಅನಿಲ್ ಕುಮಾರ್ ಎಕ್ಸ್ಪ್ಲೋಸಿಟಿ ಡಾಟ್ ಕಾಂಗೆ ತಿಳಿಸಿದ್ದಾರೆ.
ಉಪಗ್ರಹಗಳ ನೆರವಿನಿಂದ ಜಾಗತಿಕ ಮಟ್ಟದಲ್ಲಿ ಕರೆ ಪತ್ತೆ ಸಾಧ್ಯವಾಗಲಿದೆ. ವಿದೇಶದಿಂದ ಬರುವ ಬೆದರಿಕೆ ಕರೆಯನ್ನೂ ಕ್ಷಣಾರ್ಧದಲ್ಲೇ ಪತ್ತೆ ಹಚ್ಚಿ, ಅಂತಹ ವ್ಯಕ್ತಿಯನ್ನು ಕೆಲವೇ ನಿಮಿಷಗಳಲ್ಲಿ ಬಂಧಿಸಬಹುದು. ವಿಮಾನ ನಿಲ್ದಾಣಗಳಲ್ಲಿ ವಿದ್ಯುನ್ಮಾನ ತಪಾಸಣಾ ವ್ಯವಸ್ಥೆ ಜಾರಿಗೆ ತರುವ ಬಗ್ಗೆಯೂ ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಈ ವ್ಯವಸ್ಥೆ ಕೊಂಚ ದುಬಾರಿಯಾದ್ದರಿಂದ ಅಳವಡಿಕೆ ವಿಳಂಬವಾಗುತ್ತಿದೆ. ಇದು ಜಾರಿಗೆ ಬಂದಲ್ಲಿ ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ವ್ಯವಸ್ಥೆ ಸಾಕಷ್ಟು ಸುಧಾರಿಸಲು ಸಾಧ್ಯ ಎನ್ನುತ್ತಾರೆ ಕುಮಾರ್.
ಕಳೆದ ಜುಲೈನಲ್ಲಿ ಕೊಲಂಬೋ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ ನಂತರ ದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳನ್ನು ದೇಶದ ಸೂಕ್ಷ್ಮ ನಿಲ್ದಾಣಗಳೆಂದು ಪಟ್ಟಿ ಮಾಡಿ, ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಅಂದಿನಿಂದಲೇ ಪ್ರಯಾಣಿಕರನ್ನು ಮೂರು ಹಂತಗಳ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೆಪ್ಟೆಂಬರ್ 11ರ ಅಮೆರಿಕಾ ಮೇಲಿನ ದಾಳಿಯ ನಂತರ ಈ ವ್ಯವಸ್ಥೆ ಮತ್ತೂ ಬಿಗುವಾಗಿದೆ ಎಂದು ಕುಮಾರ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...