ಹಣಕಾಸು ಆಯೋಗದ ಅಧ್ಯಕ್ಷ ಟಿ.ಎನ್. ನರಸಿಂಹಮೂರ್ತಿ ಇನ್ನಿಲ್ಲ
ಮೈಸೂರು: ಕರ್ನಾಟಕ ಹಣಕಾಸು ಆಯೋಗದ ಅಧ್ಯಕ್ಷ ಟಿ.ಎನ್. ನರಸಿಂಹ ಮೂರ್ತಿಅವರು ಗುರುವಾರ ಬೆಳಗ್ಗೆ ಇಲ್ಲಿ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುಂಜಾನೆ 6.30ರಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, 7-30ರ ಸುಮಾರಿನಲ್ಲಿ ಅವರು ಕೊನೆಯುಸಿರು ಎಳೆದರು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.
ತೀವ್ರ ಹೃದಯಾಘಾತದಿಂದ ನಿಧನರಾದ ನರಸಿಂಹ ಮೂರ್ತಿ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಬನ್ನಿ ಮಂಟಪ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ : ಕರ್ನಾಟಕ ಸರಕಾರದಲ್ಲಿ ಸಚಿವರಾಗಿ, ವಿಧಾನ ಪರಿಷತ್ತಿನ ಸಭಾಪತಿಯಾಗಿ, ಸಭಾನಾಯಕರಾಗಿ ಅನುಪಮ ಸೇವೆ ಸಲ್ಲಿಸಿದ್ದ ನರಸಿಂಹ ಮೂರ್ತಿ ಅವರ ನಿಧನದಿಂದ ರಾಜ್ಯ ನಿಷ್ಠಾವಂತ ರಾಜಕಾರಣಿ ಹಾಗೂ ದಲಿತ ನಾಯಕನನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಹಲವು ಸಚಿವರು ನರಸಿಂಹ ಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.