ಮರುಕಳಿಸಿತೆ ಅಂಬಟ್ಟಿ ?
* ಮೂಲ್ಕಿ ರಾಜೇಂದ್ರ
ಹಾಸನ : ಪತಿಯಾಂದಿಗೆ ಅಮೆರಿಕಕ್ಕೆ ಹೋದ ಮೂರೇ ದಿನದಲ್ಲಿ ಹೆಣವಾಗಿ ಹಿಂತಿರುಗಿದ ಹಾಸನ ಯುವತಿಯ ಸಾವಿನ ಪ್ರಕರಣ ಹೊಸ ತಿರುವು ಪಡೆದಿದೆ. ಭಾನುವಾರ ನ್ಯೂಜರ್ಸಿಯಿಂದ ಶವ ನಗರಕ್ಕೆ ಬಂದಾಗ, ಮೃತಳ ಸಂಬಂಧಿಕರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರು, ಶವಪರೀಕ್ಷೆಗೆ ಒತ್ತಾಯಿಸಿದರು.
ಹಾಸನದ ನಿವಾಸಿ ಯಶೋದಮ್ಮ ಮತ್ತು ರಾಮೇಗೌರ ಪುತ್ರಿ ಚಂದ್ರಿಕಾ ಹಾಗೂ ನ್ಯೂಜರ್ಸಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಬಿ.ಆರ್. ಶಶಿಧರ್ ಅವರ ವಿವಾಹ 22-09-1996ರಲ್ಲೇ ನಡೆದಿತ್ತು. ಚಂದ್ರಿಕಾ ಎಂಜಿನಿಯರಿಂಗ್ ಓದುತ್ತಿದ್ದುದರಿಂದ ಇಲ್ಲೇ ಬಿಟ್ಟು ಶಶಿಧರ್ ಅಮೆರಿಕಕ್ಕೆ ಹಾರಿದ್ದರು.
ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಸೇವೆಸಲ್ಲಿಸುತ್ತಿದ್ದ ಚಂದ್ರಿಕಾರನ್ನು ಐದು ವರ್ಷದ ಬಳಿಕ ಪತಿ ಶಶಿಧರ್ ಅಮೆರಿಕಕ್ಕೆ ಕರೆದೊಯ್ದರು. ಅ.16ರಂದು ಚಂದ್ರಿಕಾರ ಮೆದುಳಲ್ಲಿ ರಕ್ತಸ್ರಾವ ಆಗುತ್ತಿದೆ, ಆಸ್ಪತ್ರೆಗೆ ಸೇರಿಸಿರುವೆ ಎಂದು ಶಶಿಧರ್ ಫೋನ್ ಮಾಡಿದರು. ಸ್ವಲ್ಪಹೊತ್ತಿಗೇ ಚಂದ್ರಿಕಾ ಸಾವಿನ ಸುದ್ದಿಯನ್ನೂ ತಿಳಿಸಿದರು.
ಅಮೆರಿಕದಲ್ಲಿ ಈ ಪ್ರಕರಣ ದಾಖಲಾಗಿದೆ. ಅಲ್ಲಿನ ವೈದ್ಯರು ಚಂದ್ರಿಕಾ ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಚಂದ್ರಿಕಾರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಂಬಂಧಿಕರು ಶವಪರೀಕ್ಷೆಗೆ ಒತ್ತಾಯಿಸಿದರು. ಕೊನೆಗೆ ಪೊಲೀಸರ ಬಿಗಿ ಬಂದೊಬಸ್ತ್ ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಶವಪರೀಕ್ಷೆ ನಡೆಸಲಾಯಿತು.
ಮರಣೋತ್ತರ ಪರೀಕ್ಷೆಯ ಬಳಿಕ ಸಮೀಪದ ಬಿಟ್ಟಗೋಡನಹಳ್ಳಿಯಲ್ಲಿ ಭಾನುವಾರ ಸಂಜೆ ಚಂದ್ರಿಕಾ ಅಂತ್ಯ ಸಂಸ್ಕಾರ ನಡೆಯಿತು. ಚಂದ್ರಿಕಾ ಪತಿ ಶಶಿಧರ್, ಶಶಿಧರ್ ತಂದೆ ಹಾಸನ ವಿದ್ಯಾನಗರ ನಿವಾಸಿ ಹಾಗೂ ನಿವೃತ್ತ ಉಪನ್ಯಾಸಕ ರಾಜೇಗೌಡ ಹಾಗೂ ಮನೆಯವರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಹಾಸನದ ಜನತೆ ಈ ಸಂಸ್ಕಾರಕ್ಕೆ ಮೂಕಸಾಕ್ಷಿಯೋ ಎಂಬಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದೀಗ ಚಂದ್ರಿಕಾರ ಬಂಧುಗಳ ಪ್ರಕಾರ...
- ಮದುವೆಯ ನಂತರ ಶಶಿಧರ್ ಹಾಗೂ ಚಂದ್ರಿಕಾ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ.
- ಮದುವೆ ಆದ 5 ವರ್ಷದಲ್ಲಿ ಚಂದ್ರಿಕಾ ಒಂದೇ ಒಂದು ಸಾರಿ ಮಾತ್ರ ತವರಿಗೆ ಬಂದಿದ್ದಳು. ಶಶಿಧರ್ ತಂದೆ ರಾಜೇಗೌಡ ಹಾಗೂ ತಾಯಿ ಶಾರದಮ್ಮ ಸೊಸೆಗೆ ತವರು ಮನೆಗೆ ಹೋಗದಂತೆ ನಿರ್ಬಂಧ ಹೇರಿದ್ದರು. ತಮ್ಮ ಮಾತು ಮೀರಿದರೆ, ವಿವಾಹ ವಿಚ್ಛೇದನ ಮಾಡಿಸುವ ಬೆದರಿಕೆ ಹಾಕಿದ್ದರು ಎನ್ನುತ್ತಾರೆ ಸೋದರ ಲೋಕೇಶ್.
- ಮದುವೆ ಸಮಯದಲ್ಲಿ 65 ಸಾವಿರ ನಗದು, 150 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಹೆಚ್ಚಿನ ವರದಕ್ಷಿಣೆಗಾಗಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂಬುದು ತಾಯಿ ಯಶೋದಮ್ಮ ಅವರ ಹೇಳಿಕೆ.
- ಚಂದ್ರಿಕಾರ ಅಸಹಜ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಹೆಚ್ಚಿನ ವರದಕ್ಷಿಣೆ ತರುವಂತೆ ಶಶಿಧರ್, ಚಂದ್ರಿಕಾಳಿಗೆ ಫೋನ್ ಮಾಡಿ ಒತ್ತಾಯಿಸುತ್ತಿದ್ದರು ಎಂದೂ ತಿಳಿಸಲಾಗಿದೆ.
- ಸಾವು ಅಮೆರಿಕೆಯಲ್ಲಿ ಸಂಭವಿಸಿರುವ ಕಾರಣ, ಈ ಪ್ರಕರಣದ ಬಗ್ಗೆ ಕಾನೂನು ಸಲಹೆ ಕೇಳಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದಾರೆ.