ಪ್ರತಿಭಟನೆಗೆ ಮಣಿದ ಸರ್ಕಾರ, ಬಯೋಟೆಕ್ ಪಾರ್ಕ್ ಸ್ಥಳಾಂತರ
ಬೆಂಗಳೂರು : ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಜೈವಿಕ ತಂತ್ರಜ್ಞಾನ ಉದ್ಯಾನವನ್ನು ಉದ್ದೇಶಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಪ್ರದೇಶದಿಂದ ಸ್ಥಳಾಂತರಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎಂದು ಕೃಷಿ ಸಚಿವ ಟಿ.ಬಿ.ಜಯಚಂದ್ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಜನತೆಯ ಭಾವನೆಗಳನ್ನು ಗೌರವಿಸಲು ಸರ್ಕಾರ ತೀರ್ಮಾನಿಸಿದೆ. ತಮ್ಮನ್ನು ಸೇರಿದಂತೆ ಇಬ್ಬರು ಸದಸ್ಯರ ಸಚಿವಾಲಯ ಸಮಿತಿ ಬಿಡದಿ ಹಾಗೂ ಬೊಮ್ಮಸಂದ್ರಗಳಿಗೆ ಭೇಟಿ ನೀಡಿ, ಬಯೋಟೆಕ್ ಪಾರ್ಕ್ ಸ್ಥಾಪನೆಗೆ ಪರ್ಯಾಯ ಸ್ಥಳ ಪರಿಶೀಲನೆ ನಡೆಸುವುದಾಗಿ ಜಯಚಂದ್ರ ತಿಳಿಸಿದರು.
ಕೃಷಿ ವಿವಿಯ ಉಪ ಕುಲಪತಿ ಸೇರಿದಂತೆ ವಿದ್ಯಾರ್ಥಿಗಳು, ಜಿಕೆವಿಕೆ ಸಿಬ್ಬಂದಿ ಬಯೋಟೆಕ್ ಪಾರ್ಕ್ ಸ್ಥಾಪನೆಗೆ ಕೃಷಿ ವಿವಿ ಆವರಣದಲ್ಲಿ 100 ಎಕರೆ ಜಮೀನು ನೀಡುವುದರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಕಳೆದ ವಾರ ನಡೆದ ಈ ಪ್ರತಿಭಟನೆ ಹಿಂಸಾಚಾರಕ್ಕೂ ಕಾರಣವಾಗಿ, ಪ್ರಕರಣ ರಾಜಕೀಯ ಬಣ್ಣವನ್ನೂ ಪಡೆದುಕೊಂಡುದುದನ್ನು ಇಲ್ಲಿ ಸ್ಮರಿಸಬಹುದು.
ಐದು ಸ್ಥಳಗಳಲ್ಲಿ ಆಹಾರ ಸಂಸ್ಕರಣೆ ಪಾರ್ಕ್
ಬಾಗಲಕೋಟೆ, ಚಿತ್ರದುರ್ಗ, ಮಾಲೂರು, ಮದ್ದೂರು ಹಾಗೂ ಬೆಳಗಾವಿಗಳಲ್ಲಿ ಆಹಾರ ಸಂಸ್ಕರಣೆ ಪಾರ್ಕ್ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಆಹಾರ ಸಂಸ್ಕರಣೆ ನೀತಿಯನ್ನು ಅಂತಿಮಗೊಳಿಸಲಾಗುವುದು ಎಂದು ಜಯಚಂದ್ರ ಹೇಳಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...