ವಿಪ್ರೋ ಸಾಫ್ಟ್ವೇರ್ ಎಂಜಿನಿಯರುಗಳು ಈಗಲೂ ನಾಪತ್ತೆ
ಬೆಂಗಳೂರು : ಉಗ್ರರ ದಾಳಿಗೆ ಸಿಲುಕಿ ಉರುಳಿ ಬಿದ್ದ ನ್ಯೂಯಾರ್ಕಿನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡದ 97ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ವಿಪ್ರೋ ಸಂಸ್ಥೆಯ ನಾಲ್ವರು ಸಾಫ್ಟ್ವೇರ್ ಎಂಜಿನಿಯರ್ಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ವಿಪ್ರೋ ಸಹಾಯ ವಿಭಾಗದ ಅಧಿಕಾರಿ ಸಂತೋಷ್ ಕುಮಾರ್ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಶಶಿಕಿರಣ್ ಕಡಬ, ಹೆಮಂತ್ ಪುತ್ತೂರು, ಶ್ರೇಯಸ್ ರಂಗನಾಥ್ ಹಾಗೂ ದೀಪಿಕಾ ರಾವ್ ಅಮೆರಿಕೆಯಲ್ಲಿ ಯೋಜನೆಯಾಂದರ ಕೆಲಸ ಮಾಡುತ್ತಿದ್ದರು. ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅವರ ತಂದೆ- ತಾಯಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ಕಂಪನಿ ನೈತಿಕ ಸ್ಥೈರ್ಯ ತುಂಬುತ್ತಿದೆ ಎಂದು ಸಂತೋಷ್ ಕುಮಾರ್ ಹೇಳಿದರು.
ಕಂಪನಿಯ ಜೊತೆ ಸದಾ ಒಡನಾಟ ಇಟ್ಟುಕೊಂಡಿರುವ ತಂದೆ- ತಾಯಿಯರು ಅದು ನೀಡುತ್ತಿರುವ ಮಾಹಿತಿಯನ್ನೇ ನೆಚ್ಚುತ್ತಿದೆ. ಕಂಪನಿ ತಮ್ಮ ಮಕ್ಕಳನ್ನು ಹುಡುಕಲು ಕೈಮೀರಿ ಪ್ರಯತ್ನಿಸುತ್ತಿದೆ. ಇದರ ನಡುವೆ ಮಾಧ್ಯಮದವರು ಇಲ್ಲ ಸಲ್ಲದ್ದನ್ನು ಬರೆದು, ಪುಕಾರೆಬ್ಬಿಸುತ್ತಿರುವುದು ಸರಿಯಲ್ಲ ಎಂಬುದು ಪೋಷಕರೊಬ್ಬರ ಅಭಿಪ್ರಾಯ. ಆಂಗ್ಲ ಪತ್ರಿಕೆಯಾಂದು ಬುಧವಾರದ ಸಂಚಿಕೆಯಲ್ಲಿ ಶ್ರೇಯಸ್ ರಂಗನಾಥ್ ಸಂಭವನೀಯ ಮೃತರ ಪಟ್ಟಿಯಲ್ಲಿರುವುದಾಗಿ ಪ್ರಕಟಿಸಿತ್ತು.
ಮಾಧ್ಯಮಗಳು ಪ್ರಮಾಣೀಕರಿಸಿ ನೋಡದೆ, ಅರೆಬರೆ ಅಥವಾ ತಪ್ಪು ಮಾಹಿತಿ ಕೊಟ್ಟಲ್ಲಿ ಮೊದಲೇ ಆಗಿರುವ ಗಾಯದ ಮೇಲೆ ಉಪ್ಪು ಸುರಿದಂತೆ. ಇದು ಸಲ್ಲ ಎಂದು ಕಳೆದುಹೋಗಿರುವ ಸಾಫ್ಟ್ವೇರ್ ಎಂಜಿನಿಯರೊಬ್ಬರ ತಂದೆ ಅಲವತ್ತುಕೊಂಡರು.
(ಪಿಟಿಐ)