ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ
Vande Bharat Express: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದಿದೆ. ಇದೀಗ ಈ ಸ್ಪೀಡರ್ ರೈಲುಗಳಿಗೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಗಳನ್ನು ಮೈಸೂರಿನಲ್ಲಿ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ 'ಆಧುನಿಕ ವಂದೇ ಭಾರತ್ ನಿರ್ವಹಣಾ ಕೇಂದ್ರ' ಸ್ಥಾಪನೆಗೆ ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸದ್ಯ ಮೈಸೂರಿನಲ್ಲಿ ಹೊಸ ಸರಕು ಟರ್ಮಿನಲ್ ವ್ಯಾಗನ್ ಡಿಪೋ ಇದೆ. ಇದೇ ಜಾಗದಲ್ಲಿ ವಂದೇ ಭಾರತ್ ಆಧುನಿಕ ಡಿಪೋ ನಿರ್ಮಿಸಲು ಚಿಂತನೆ ಇದೆ. ಆಗ ವ್ಯಾಗನ್ ಡಿಪೋವನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲು ಪ್ರಸ್ತಾವನೆ ಇಡಲಾಗಿದೆ. ಇದೆಲ್ಲವು ಅಂದುಕೊಂಡಂತಾದರೆ ವಂದೇ ಭಾರತ್ ರೈಲುಗಳ ನಿರ್ವಹಣೆಯಲ್ಲಿ ಕರ್ನಾಟಕದ ಮೈಸೂರು ಪ್ರಮುಖ ಪಾತ್ರ ವಹಿಸಲಿದೆ.

ವಂದೇ ಭಾರತ್ ಡಿಪೋದ ಕೆಲಸ
ಸ್ವಯಂ ಚಾಲಿತ ರೈಲುಸೆಟ್ಗಳ ತ್ವರಿತ ಸೇವೆಗಾಗಿ ವಿನ್ಯಾಸಗೊಳಿಸಲಾದ ಪಿಟ್ ಲೈನ್ ಕೇಂದ್ರಗಳನ್ನು ಡಿಪೋ ಒಳಗೊಂಡಿರುತ್ತದೆ. ರೈಲುಗಳ ಕ್ಲೀನಿಂಗ್, ವಿಶೇಷ ಅಂಡರ್ಸ್ಲಂಗ್ ಉಪಕರಣಗಳ ನಿರ್ವಹಣೆ, ಹೈಟೆಕ್ ಸಾಧನಗಳ ಜೋಡಣೆ, ಇನ್ನಿತರ ನಿರ್ವಹಣೆ, ಮುಖ್ಯವಾಗಿ ಹೈ-ಸ್ಪೀಡ್ ರೈಲು ನಿರ್ವಹಣೆಗಾಗಿ ಮೀಸಲಾದ ತರಬೇತಿ ಕೇಂದ್ರಗಳನ್ನು ಈ ಡಿಪೋ ಒಳಗೊಂಡಿರುತ್ತದೆ.
ಎಂಟು ವರ್ಷಗಳ ಹಿಂದೆ (2019) ರೈಲ್ವೆ ಇಲಾಖೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಪರಿಚಯಿಸಿತು. ಅಲ್ಲಿಂದ ಈವರೆಗೆ ಸುಮಾರು 160 ರೈಲುಗಳು ದೇಶವ್ಯಾಪಿ ಸಂಚಾರ ಸೇವೆ ನೀಡುತ್ತಿವೆ. ದೇಶದ ಅಪಾರ ಪ್ರಯಾಣಿಕರ ಅಚ್ಚು ಮೆಚ್ಚಿನ ರೈಲು ಇದಾಗಿದೆ. ಇದರ ನಿರ್ವಹಣೆಗೆ 400 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಸ್ಥಾಪನೆಗೆ ಮುಂದಾಗಿದೆ. ರೈಲುಗಳ ದುರಸ್ತಿಯು ಉದ್ದೇಶಿತ ಮೈಸೂರು ಡಿಪೋದಲ್ಲಿ ಮಾಡಲಾಗುವುದು. ಈ ಮೂಲಕ ಭವಿಷ್ಯದಲ್ಲಿ ಮೈಸೂರು ವಂದೇ ಭಾರತ್ ರೈಲುಗಳ ನಿರ್ವಹಣಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಅವರು ವಿವರಿಸಿದರು.
ಶೀಘ್ರವೇ ಸರ್ವೇ, ನಂತರ ಪ್ರಸ್ತಾವನೆ ಸಲ್ಲಿಕೆ
ಸದರಿ ಯೋಜನೆಯು ಪ್ರಸ್ತವಾನೆಯ ಹಂತದಲ್ಲಿದೆ. ಕೇಂದ್ರ ಸ್ಥಾಪನೆಗೂ ಮೊದಲು ಕಟ್ಟಡ ಸಮೀಕ್ಷೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಬೇಕಿದೆ. ಈ ಎಲ್ಲ ಆರಂಭಿಕೆ ಕೆಲಸಗಳು ಮುಗಿಯುತ್ತಿದ್ದಂತೆ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಮಂಡಳಿ ಹಾಗೂ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದರು. ಅಲ್ಲಿಂದ ಸಲಹೆ ಸೂಚನೆಗಳು ಬಂದಲ್ಲಿ ಒಂದಷ್ಟು ಬದಲಾವಣೆ ಆಗಬಹುದು. ಇಲ್ಲವೇ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಡಿಪೋ ಕಾಮಗಾರಿ ಕೆಲಸಗಳು ಆರಂಭವಾಗಲಿದೆ.
ಟರ್ಮಿನಲ್ ವ್ಯಾಗನ್ ಡಿಪೋ ಸ್ಥಳಾಂತರ ಏಕೆ?
ಸರಕು ಟರ್ಮಿನಲ್ ವ್ಯಾಗನ್ ಡಿಪೋ ಸದ್ಯ ಮೈಸೂರಿನಲ್ಲಿದೆ. ಅಲ್ಲಿಯೇ ವಂದೇ ಭಾರತ್ ರೈಲುಗಳ ಆಧುನಿಕ ಡಿಪೋ ತೆರೆಯಲು ನಿರ್ಧರಿಸಲಾಗಿದೆ. ವ್ಯಾಪಕ ಜಾಗವನ್ನು ವಿಸ್ತರಿಸಿಕೊಳ್ಳಲಿದೆ. ಹೀಗಾಗಿ ಅಲ್ಲಿರುವ ವ್ಯಾಗನ್ ಡಿಪೋವನ್ನು ಮಂಡ್ಯ ಜಿಲ್ಲೆಯ ಯೆಲಿಯೂರಿಗೆ ಸ್ಥಳಾಂತರಕ್ಕೆ ಪ್ರಸ್ತಾವನೆ ಇಡಲಾಗಿದೆ. ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಮಿತ್ತಲ್ ಹೇಳಿದರು.












Click it and Unblock the Notifications