ಶಿವಾಜಿನಗರದಲ್ಲಿ ಲಕ್ಷಕ್ಕೂ ಹೆಚ್ಚು ಮೇರೀ ಭಕುತರ ಭಾರೀ ಜಾತ್ರೆ
ಬೆಂಗಳೂರು : ಅಲೋಪತಿ, ಹೋಮಿಯೋಪತಿ, ಯುನಾನಿ, ಆಯುರ್ವೇದ ಇನ್ನೂ ತರಾವರಿ ವೈದ್ಯಕೀಯ ಪದ್ಧತಿಗಳು ಜಾರಿಯಲ್ಲಿದ್ದರೂ, ಆರೋಗ್ಯ ಮಾತೆ ಮುನಿದರೆ ಗೋವಿಂದ ಅಂತ ನಂಬಿದವರೇ ಹೆಚ್ಚು. ರೋಗ- ರುಜಿನ ಕಷ್ಟ - ಕಾರ್ಪಣ್ಯಗಳು ಬಂದಾಗ ಚಿಕಿತ್ಸೆಯ ಜೊತೆಜೊತೆಗೇ ಹರಕೆ ಹೊರುವವರು ಅಸಂಖ್ಯ. ಇಂಥಾ ಒಂದು ಲಕ್ಷಕ್ಕೂ ಹೆಚ್ಚು ಭಕುತರ ಜಾತ್ರೆ ಶನಿವಾರ ಶಿವಾಜಿನಗರದ ಬಾಸಿಲಿಕಾ ಚರ್ಚ್ನಲ್ಲಿ ನೆರೆದಿದೆ.
ನಗರದ ಮಂದಿಯಷ್ಟೇ ಅಲ್ಲದೆ ಮೈಸೂರು, ದೊಡ್ಡಬಳ್ಳಾಪುರ ಹಾಗೂ ಕೋಲಾರದಿಂದ ಕ್ರಿಶ್ಚಿಯನ್ ಬಂಧುಗಳು ದಂಡು ದಂಡಾಗಿ ಬರುತ್ತಿದ್ದಾರೆ. ಮೇರಿಯಮ್ಮ ಹುಟ್ಟಿದ ಈ ದಿನ ಪ್ರಾರ್ಥಿಸಿದರೆ, ಆರೋಗ್ಯ ಭಾಗ್ಯ ಕೊಡುತ್ತಾಳೆ ಅನ್ನೋದು ಬಲವಾದ ನಂಬುಗೆ. ಮೊದಲೇ ಗಿಜಿಗಿಜಿಯಾದ ಶಿವಾಜಿ ನಗರಿಯಲ್ಲಿ ಈ ಹೊತ್ತು 150ಕ್ಕೂ ಹೆಚ್ಚು ಪೊಲೀಸರು ಜನರ ನೂಕುನುಗ್ಗಲು ತಪ್ಪಿಸಲು ಹೆಣಗಾಡುತ್ತಿದ್ದಾರೆ. ಕ್ರಿಶ್ಚಿಯನ್ನರ ಈ ಭಾರೀ ಜಾತ್ರೆ ಮುಗಿಯುತ್ತಾ ಬಂದಿದ್ದು, ಈವರೆಗೆ ಸುಸೂತ್ರವಾಗಿ ನಡೆದಿದ್ದು, ಆರೋಗ್ಯ ಮಾತೆಯ ದಯೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...