36 ತಿಂಗಳಲ್ಲಿ ವಿಧಾನಸೌಧದ ಪಕ್ಕದಲ್ಲೊಂದು ತದ್ರೂಪ ಸೌಧ
ಬೆಂಗಳೂರು : ಬೆಂಗಳೂರಿನ ವಿವಿಧ ಕಡೆಗಳಲ್ಲಿ ಹಂಚಿಹೋಗಿರುವ ಎಲ್ಲ ರಾಜ್ಯ ಸರಕಾರಿ ಇಲಾಖೆಗಳನ್ನೂ ಒಂದೇ ಕಟ್ಟಡದಡಿಯಲ್ಲಿ ತರುವ ಪ್ರಯತ್ನವಾಗಿ ನಿರ್ಮಿಸಲುದ್ದೇಶಿಸಿರುವ ವಿಧಾನಸೌಧದ ದಕ್ಷಿಣ ಬ್ಲಾಕ್ನ ಶಂಕುಸ್ಥಾಪನೆ ಗುರುವಾರ ನೆರವೇರಿತು.
ವಿಧಾನಸೌಧದ ಬಲಬದಿಯಲ್ಲಿ ಅಂದರೆ ಸರಕಾರಿ ಮುದ್ರಣಾಲಯವಿದ್ದ ಜಾಗದಲ್ಲಿ 100 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಈ ದಕ್ಷಿಣ ಬ್ಲಾಕ್ಗೆ ಮುಖ್ಯಮಂತ್ರಿ ಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೃಷ್ಣ, ಸೌತ್ಬ್ಲಾಕ್ನ ಅಗತ್ಯವನ್ನು ವಿವರಿಸಿದರು.
50 ವರ್ಷಗಳ ಹಿಂದೆ ಕೆಂಗಲ್ ಹನುಮತಯ್ಯನವರು ವಿಧಾನಸೌಧ ಕಟ್ಟಿದಾಗ ಇದ್ದ ಸಚಿವರ ಸಂಖ್ಯೆ 9 ಮಾತ್ರ. ಆದರೆ, ಇಂದಿನ ಅಗತ್ಯಕ್ಕೆ ಅನುಗುಣವಾಗಿ ರಾಜ್ಯದ ಮಂತ್ರಿಗಳ ಸಂಖ್ಯೆ 40 ದಾಟಿದೆ, ಇಲಾಖೆಗಳ ಸಂಖ್ಯೆ ಹಾಗೂ ಅಧಿಕಾರಿಗಳ ಸಿಬ್ಬಂದಿಯ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಕಟ್ಟಡದ ಅಗತ್ಯ ಇತ್ತು ಎಂದರು.
ಬೆಂಗಳೂರಿನ ವಿವಿಧ ಕಡೆಗಳಲ್ಲಿ ಇರುವ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಇದಾಗಿದ್ದು, 36 ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಕೃಷ್ಣ ವಿವರಿಸಿದರು. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಧರ್ಮಸಿಂಗ್, ವಿಧಾನಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ, ಹಾಗೂ ಕೃಷ್ಣ ಸಂಪುಟದ ಹಲವು ಸಚಿವರು ಪಾಲ್ಗೊಂಡಿದ್ದರು.
ಒಂದು ಮಾಹಿತಿ : ವಿಧಾನಸೌಧ ಸೌತ್ ಬ್ಲಾಕ್ ನಿರ್ಮಾಣಕ್ಕೆ ತಗುಲುವ ಅಂದಾಜು ವೆಚ್ಚ ಸುಮಾರು 100 ಕೋಟಿ ರುಪಾಯಿ. 1956 ರಲ್ಲಿ ಈಗಿರುವ ವಿಧಾನಸೌಧ ಪೂರ್ಣಗೊಂಡಾಗ ಅದಕ್ಕೆ ತಗುಲಿದ್ದು ಕೇವಲ 1.84 ಕೋಟಿ ರುಪಾಯಿ !
ಮುಖಪುಟ / ಇವತ್ತು... ಈ ಹೊತ್ತು...