ಮಾತೃಭಾಷೆ ಕನ್ನಡ : ತರವಲ್ಲ ತಗಿ ನಿನ್ನ ತಂಬೂರಿ - ಬಿಕೆಸಿ
ಬೆಂಗಳೂರು : ಬೆಂಗಳೂರಿಗೆ ಕನ್ನಡ ಮಾಧ್ಯಮ ಶಾಲೆಗಳೇ ಸಾಕು. ಎಂಜಿನಿಯರಿಂಗ್ ವಿಷಯಗಳನ್ನೂ ಕನ್ನಡದಲ್ಲೇ ಕಲಿಸಿ ಎಂಬ ಕೆಲವರ ಅಭಿಪ್ರಾಯಗಳನ್ನು ನಾನು ಒಪ್ಪುವುದಿಲ್ಲ. ನಾನೂ ಕನ್ನಡಿಗ. ಕನ್ನಡ ಸಾಹಿತ್ಯದ ಓದುಗನೂ ಹೌದು. ಆದರೂ ಕನ್ನಡ ಮಾತ್ರ ಸಾಕು ಅನ್ನುವುದನ್ನು ಪ್ರಸ್ತುತ ಸನ್ನಿವೇಶದಲ್ಲಿ ಸುತಾರಾಂ ಒಪ್ಪುವುದಿಲ್ಲ- ಹೀಗೆಂದವರು ಕರ್ನಾಟಕ ವಾರ್ತಾ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್.
ನಗರದಲ್ಲಿ ಶನಿವಾರ, ದೆಹಲಿ ಪಬ್ಲಿಕ್ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೆಂಗಳೂರು ಈಗ ಜಾಗತಿಕ ಗ್ರಾಮ (ಗ್ಲೋಬಲ್ ವಿಲೇಜ್). ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮೂಲಕ ಗುರ್ತಿಸಿಕೊಂಡು, ಜಗತ್ತಿನ ಕಣ್ಸೆಳೆದಿರುವ ನಗರಿ. ನಮ್ಮೂರಿನ, ನಮ್ಮ ದೇಶದವರೇ ಅಲ್ಲದೆ ಹೊರ ದೇಶಗಳ ವಿವಿಧ ಮನಸ್ಕರು, ಭಾಷಿಕರ ಒಡನಾಟ ಬೆಂಗಳೂರಿನೊಟ್ಟಿಗೆ. ಇಂಥಾ ಸನ್ನಿವೇಶದಲ್ಲಿ ಮಾತೃಭಾಷೆಗೇ ಅಂಟಿಕೊಂಡು ಇರುತ್ತೇವೆ ಅನ್ನುವುದು ಸರಿಯಲ್ಲ. ವಿಶಾಲ ದೃಷ್ಟಿಕೋನ ಇಟ್ಟುಕೊಂಡು, ಮುಕ್ತ ಮನಸ್ಕರಾಗಿರಬೇಕು ಎಂದು ಕರೆ ಕೊಟ್ಟರು.
ಪುಸ್ತಕದ ಚೀಲಗಳ ಹೊರೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯಶ್ಪಾಲ್ ಶರ್ಮ ಸಮಿತಿ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಲ್ಲಿಸಿರುವ ವರದಿಯ ಶಿಫಾರಸ್ಸುಗಳನ್ನು ಕೇಂದ್ರ ಅನುಷ್ಠಾನಕ್ಕೆ ತರದಿರುವುದೇ ಆಶ್ಚರ್ಯಕರ ಎಂದರು.
ಕೊಳಗೇರಿ ಮಕ್ಕಳಿಗೊಂದು ಶಾಲೆ : ಬೆಂಗಳೂರಿನ ಈ ಶಾಲೆ ನಮ್ಮ ಸೊಸೈಟಿಯ 61ನೆಯದು. ಕೆ.ಕೆ.ಶಿಕ್ಷಣ ಮತ್ತು ಸೇವಾ ಟ್ರಸ್ಟ್ ಸಹಯಾಗದೊಂದಿಗೆ ಸದ್ಯದಲ್ಲೇ ಶ್ರೀನಗರ ಹಾಗೂ ಲೆಹ್ಗಳಲ್ಲೂ ಶಾಲೆ ತೆರೆಯಲಿದ್ದೇವೆ. ಕೊಳಗೇರಿ ಮಕ್ಕಳಿಗೆ ಆರೋಗ್ಯ, ಆಹಾರದ ಪೌಷ್ಟಿಕಾಂಶಗಳ ಕುರಿತು ಬೋಧಿಸುವ ತರಗತಿಗಳನ್ನು ಮಧ್ಯಾಹ್ನದ ವೇಳೆ ನಡೆಸಲು ನಿರ್ಧರಿಸಿದ್ದು, ಅನುಭವ ಶಿಕ್ಷಾ ಕೇಂದ್ರ ಎಂಬ ಹೆಸರಿನಲ್ಲಿ ಇದು ಕಾರ್ಯ ನಿರ್ವಹಿಸಲಿದೆ ಎಂದು ದೆಹಲಿ ಪಬ್ಲಿಕ್ ಸೊಸೈಟಿ ಅಧ್ಯಕ್ಷ ಸಲ್ಮಾನ್ ಖುರ್ಷಿದ್ ಹೇಳಿದರು.
(ಇನ್ಫೋ ವಾರ್ತೆ)