ಮಂಗಲ್ಪಾಡಿಯಲ್ಲಿ ಬಸ್ಸುಗಳೆರಡರ ಮುಖಾಮುಖಿ, ಏಳು ಸಾವು
ಮಂಜೇಶ್ವರ : ಕಾಸರಗೋಡು ಸಮೀಪದ ಮಂಗಲ್ಪಾಡಿಯಲ್ಲಿ ಎರಡು ಬಸ್ಸುಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಏಳು ಮಂದಿ ಸ್ಥಳದಲ್ಲೇ ಮೃತರಾಗಿರುವ ದುರಂತ ಸೋಮವಾರ ಸಂಭವಿಸಿದೆ.
ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ಸು ಮತ್ತು ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಖಾಸಗಿ ಬಸ್ಸು ಉಪ್ಪಳ- ಮಂಗಲ್ಪಾಡಿ ಗ್ರಾಮ ಪಂಚಾಯತ್ ಬಳಿ ಪರಸ್ಪರ ಡಿಕ್ಕಿ ಹೊಡೆದಾಗ ಆರು ಮಂದಿ ಸ್ಥಳದಲ್ಲೇ ಮೃತ ಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಮೃತ ಪಟ್ಟವರನ್ನು ಎರ್ನಾಕುಳಂ ಲಾರ್ಡ್ ಕಾನ್ವೆಂಟಿನ ಸಿಸ್ಟರ್ ಅನ್ನಿ ಮಾಥ್ಯೂ, ಮಂಗಲ್ಪಾಡಿ ವಿಜಯಾ ಬ್ಕಾಂಕ್ ಮ್ಯಾನೇಜರ್ ಲತೀಫ್ ಮೊಗ್ರಾಲ್(45), ಮುಟ್ಟಕೀಯೂರಿನ ಹಸನ್ (40), ಬಂಬ್ರಾಣ ಪಟ್ಟಿ ಹೌಸಿನ ಅಬೂಬಕ್ಕರ್(45), ಬೋಳಾರದ ಪ್ರದೀಪ್ ಶೆಟ್ಟಿ(35), ಎಂಬುದಾಗಿ ಗುರುತಿಸಲಾಗಿದೆ.
ಎರಡೂ ಬಸ್ಸುಗಳು ವಿಪರೀತ ವೇಗದಲ್ಲಿ ಚಲಿಸುತ್ತಿದ್ದು, ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
(ಇನ್ಫೋ ವಾರ್ತೆ)