ಬೆಂಗಳೂರಲ್ಲಿ ಜೂನ್ 1ರಂದು ಬಿಸ್ಮಿಲ್ಲಾ ಖಾನ್ ಸಂಗೀತ ಸಂಜೆ
ಬೆಂಗಳೂರು : ಡಾ. ರಾಜ್ಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಚಿತ್ರ ನೋಡಿದ್ದೀರಾ? ಹಾಗಾದರೆ, ನೀವು ಅದರಲ್ಲಿ ಸುಮಧುರವಾದ ಶಹನಾಯ್ ವಾದನವನ್ನು ಆನಂದಿಸಿದ್ದೀರಿ. ಅಷ್ಟು ಮನೋಹರವಾಗಿ ಶಹನಾಯಿ ನುಡಿಸಿದವರು ಯಾರೆಂದು ಗೊತ್ತಲ್ಲ?
ಈ ಸಾಲಿನ ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಉಸ್ತಾದ್ ಬಿಸ್ಮಿಲ್ಲಾಖಾನ್. ಈಗ ಮತ್ತೊಮೆ ಬೆಂಗಳೂರಿಗರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ರ ವಾದ್ಯ ಸಂಗೀತ ಸುಧೆಯ ಸವಿಯುವ ಅವಕಾಶ ಲಭ್ಯವಾಗಿದೆ. ಜೂನ್ 1ರಂದು ಜೀವನ ಧರ್ಮ ಯೋಗ ಟ್ರಸ್ಟ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಹಾಗೂ ಡಾ. ಎಲ್ ಸುಬ್ರಹ್ಮಣ್ಯಂ ಅವರ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಡಾ.ಎಲ್.ಸುಬ್ರಹ್ಮಣ್ಯಂ ಒಟ್ಟಾಗಿ ಕಾರ್ಯಕ್ರಮ ನೀಡುತ್ತಿರುವುದು ಇದೇ ಮೊದಲು.
ಈ ವಿಷಯವನ್ನು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಸದಸ್ಯೆ ಭಾನು ತಿಳಿಸಿದರು. ಜೂನ್ ಒಂದರ ಸಂಜೆ 6.30 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಟ್ರಸ್ಟ್ ಸ್ಥಾಪಿಸಲು ಉದ್ದೇಶಿಸಿರುವ ವ್ಯಾಸ ವೇದ ಪೀಠದ ನಿರ್ಮಾಣಕ್ಕೆ ಬಳಸಲಾಗುವುದು ಎಂದೂ ಅವರು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಡೋನರ್ ಪಾಸ್ಗಳು ಲಭಿಸುವ ಸ್ಥಳಗಳು ಇಂತಿವೆ- ಜಯನಗರ 4ನೇ ಬ್ಲಾಕ್ನ ಕ್ಯಾಲಿಪ್ಸೋ (ಮ್ಯೂಸಿಕ್ ಶಾಪ್), ಮಲ್ಲೇಶ್ವರ 11ನೇ ಕ್ರಾಸ್ನ ಆವಿಷ್ಕಾರ್ ಫರ್ನಿಶಿಂಗ್ಸ್, ಬನಶಂಕರಿ 3ನೇ ಹಂತದ ಪ್ರೊಲೈನ್ ಶಾಪ್ (ಕಾಮಾಕ್ಯ ಚಿತ್ರಮಂದಿರದ ಬಳಿ) ಮತ್ತು ನ್ಯೂ ಬಿಇಎಲ್ ರಸ್ತೆಯ ಸಂಜೀವನ ಯೋಗ ಧಾಮ. ಹೆಚ್ಚಿನ ವಿವರಗಳಿಗೆ 9845001252 ಅಥವಾ 6699261 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)