ವಿನಾಕರಣ ಮರುನಾಮಕರಣ, ನಮ್ಮತನವೆಂಬುದರ ನಿತ್ಯ ಹರಣ
*ಅಮೋಘವರ್ಷಬೆಂಗಳೂರು : ಹಲವು ರಾಜಕೀಯ ಕಾರಣಗಳಿಗಾಗಿ ಹಾಗೂ ಕೆಲವರ ಒತ್ತಡಕ್ಕೆ ಮಣಿದು ಬೆಂಗಳೂರಿನ ರಸ್ತೆಗಳ, ವೃತ್ತದ ಹೆಸರನ್ನು ಬದಲಾಯಿಸಿ, ಹೊಸ ಹೆಸರು ಇಡುವುದು ಒಂದು ಸಂಪ್ರದಾಯವೇ ಆಗಿದೆ. ಬೆಂಗಳೂರಿನ ಹಲವು ಪಾರಂಪರಿಕ ಮಹತ್ವದ ರಸ್ತೆಗಳ ಹೆಸರೂ ಬದಲಾಗಿವುದು ಈಗ ಇತಿಹಾಸ.
ಮೊನ್ನೆ ಅಂದರೆ ಮೇ 14ರಂದು ನಗರದ ಮತ್ತೆರಡು ರಸ್ತೆಗಳಿಗೆ ಡಾ. ಸಿದ್ಧಯ್ಯ ಪುರಾಣಿಕ ಮಾರ್ಗ, ಡಾ.ಎಂ.ಸಿ. ಮೋದಿ ರಸ್ತೆ ಎಂದು ಮರು ನಾಮಕರಣ ಮಾಡಲಾಯಿತು. ಬೆಂಗಳೂರಿನ ಮಾಜಿ ಮೇಯರ್ ಹಾಗೂ ಹಿರಿಯ ಪತ್ರಕರ್ತ ಜಿ. ನಾರಾಯಣ ಈ ಸಂದರ್ಭದಲ್ಲಿ ಒಂದು ಕಿವಿ ಮಾತು ಹೇಳಿದರು. ಚಿಕ್ಕ ಪುಟ್ಟ ರಸ್ತೆಗಳಿಗೆ ನಾಡಿನ ಗಣ್ಯರ ಹೆಸರಿಟ್ಟು ಅವಮಾನ ಮಾಡಬೇಡಿ ಎಂದರು.
ನಗರದ ಹನುಮಂತನಗರದ ಚಿಕ್ಕ ರಸ್ತೆಯಾಂದಕ್ಕೆ ಗೋಕಾಕ್ ಅವರ ಹೆಸರಿಟ್ಟಿರುವುದು ನಾರಾಯಣ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವರು ಈ ಅಭಿಪ್ರಾಯವನ್ನು ಅನುಮೋದಿಸಿದರೆ, ಮತ್ತೆ ಕೆಲವರು ತಿರಸ್ಕರಿಸುತ್ತಾರೆ. ಬೆಂಗಳೂರು ತುಂಬೆಲ್ಲಾ ವಣ್ಣಾರ್ ಪೇಟೆ, ಶಿವಾಜಿ ರಸ್ತೆ, ಕಸ್ತೂರಬಾ ರಸ್ತೆ, ಇಂದಿರಾಗಾಂಧೀ ವೃತ್ತ, ರಾಜೀವ್ಗಾಂಧೀ ನಗರಗಳೇ ತುಂಬಿರುವಾಗ ಹನುಮಂತನಗರದಲ್ಲಾದರೂ ಕನ್ನಡ ಕವಿ ಪುಂಗವರ ಹೆಸರು ರಾರಾಜಿಸುತ್ತಿದೆಯಲ್ಲ ಎಂದು ನಾವು ಸಂತೋಷ ಪಡಬೇಕು ಎನ್ನುತ್ತಾರೆ.
ರಸ್ತೆ ಚಿಕ್ಕದು ದೊಡ್ಡದು ಎಂಬ ಪ್ರಶ್ನೆ ಇಲ್ಲಿ ಮುಖ್ಯವಲ್ಲ. ಕನ್ನಡ ಕವಿಗಳಿಗೆ ಗೌರವ ಸೂಚಿಸುವುದು ಮುಖ್ಯ. ಕಡೆಯಪಕ್ಷ ಹನುಮಂತ ನಗರದ ಜನರಾದರೂ ಕನ್ನಡ ಸಾಹಿತಿಗಳನ್ನು ನಿತ್ಯ ನೆನೆಯುತ್ತಾರೆ ಎನ್ನುತ್ತಾರೆ. ಅಲ್ರೀ ಚಿಕ್ಕ ರಸ್ತೆಗೆ ಕನ್ನಡ ಸಾಹಿತಿ ಹೆಸರು ಇಟ್ರೆ ಬೆಲೆ ಕಡಿಮೆ ಆಗತ್ತಾ ?
ಬಟ್ಟೆ ಬದಲಾಯಿಸಿದರೆ ಗುಣ ಬದಲಾದೀತೇ ? : ಇಲ್ಲಿ ಮತ್ತೂ ಒಂದು ವಾದವಿದೆ. ನೂರು ಇನ್ನೂರು ವರ್ಷಗಳ ಹಿಂದಿನ ಐತಿಹಾಸಿಕ ಹೆಸರುಗಳನ್ನು ಅಳಿಸಿ ಅಲ್ಲಿ ಹೊಸ ಹೆಸರು ಇಡುವುದು ಸರಿಯೇ ? ಕೆಲವು ಹೆಸರುಗಳಿಗೆ ಸುದೀರ್ಘ ಇತಿಹಾಸವೇ ಇರುತ್ತದೆ. ಜನಮಾನಸದಲ್ಲಿ ಅದು ಅಚ್ಚಳಿಯದಂತೆ ಉಳಿದಿರುತ್ತದೆ. ಏಕಾ ಏಕಿ ಹೆಸರು ಬದಲಿಸಿದರೂ, ಜನ ಹಳೆ ಹೆಸರೇ ಬಳಸುತ್ತಾರೆ. ಉದಾಹರಣಗೆ ರೆ-ಸಿ-ಡೆ-ನ್ಸಿ ರಸ್ತೆ-ಗೆ ಜನರಲ್ ಕೆ. ಕಾರಿ-ಯ-ಪ್ಪ-ನ-ವ-ರ ಹೆಸ-ರ-ನ್ನಿ-ಟ್ಟಿ-ದ್ದರೂ ಜನ ಅದನ್ನು ಇಂದೂ ರೆಸಿಡೆನ್ಸಿ ರಸ್ತೆ ಎಂದೇ ಕರೆಯುತ್ತಾರೆ. ಕಾರ್ಪೊರೇಷನ್ ಎದುರು ಇರುವ ಹಡ್ಸನ್ ಸರ್ಕಲ್ಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಎಂದು ಹೆಸರಿಡಲಾಗಿದೆಯಾದರೂ, ಅದು ಬಹಳ ಜನರಿಗೆ ತಿಳಿದೇ ಇಲ್ಲ.
ಇನ್ನು ಕಾಕ್ಸ್ ಟೌನ್ ಮತ್ತು ದೊಡ್ಡಕುಂಟೆ - ಸರ್ವಜ್ಞ ನಗರ ಆಯಿತು, ಫ್ರೆಜರ್ ಟೌನ್ - ಪುಲಿಕೇಶಿ ನಗರ ಆಯಿತು, ಮಾಧವನ್ ಪಾರ್ಕ್ ಆಟದ ಮೈದಾನ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಆಯಿತು, ಬೆನ್ಸನ್ ಟೌನ್ - ಕದಂಬ ನಗರ ಆಯಿತು. ಆದರೆ, ಜನ ಇಂದೂ ಟಾಸ್ಕರ್ ಟೌನ್, ಬೆನ್ಸನ್ ಟೌನ್, ಮಾಧವನ್ ಪಾರ್ಕ್ ಎನ್ನುತ್ತಾರೆಯೇ ವಿನಾ ಹೊಸ ಹೆಸರಿನಿಂದ ಕರೆಯುವುದೇ ಇಲ್ಲ.
ಆ ಹಿಂದಿನ ಹೆಸರಿಗೆ ಒಂದು ಐತಿಹಾಸಿಕ ನೆಲೆಗಟ್ಟಿದೆ. ಬ್ರಿಟಿಷರ ಕಾಲದಿಂದಲೂ ಅದಕ್ಕೆ ಮಹತ್ವ ಇದೆ. ಕೋಲಾರ ಚಿನ್ನದ ಗಣಿಯಲ್ಲಿ ಚಿನ್ನವನ್ನು ಹೆಕ್ಕಿ ತೆಗೆಯಲು ಕಾರಣೀಭೂತರಾದ ಲ್ಯಾವೆಲ್ಲೆ ಅವರ ಹೆಸರಿನಲ್ಲೊಂದು ರಸ್ತೆ ಬೆಂಗಳೂರಿನಲ್ಲಿದೆ. ಇದು ಇಂಗ್ಲಿಷ್ ಹೆಸರೆಂದು ಬದಲಾಯಿಸಿದರೆ, ಕರ್ನಾಟಕವನ್ನು ಚಿನ್ನದ ನಾಡನ್ನಾಗಿ ಮಾಡಿದ ವ್ಯಕ್ತಿಗೆ ನಾವು ಅಗೌರವ ಸೂಚಿಸದಂತೆ ಎನ್ನುತ್ತಾರೆ ಮತ್ತೆ ಕೆಲವರು.
ಈ ವಾದವೂ ಒಪ್ಪತಕ್ಕದ್ದೇ. ನಮಗೆ ನಿಜಕ್ಕೂ ಕನ್ನಡ ಸಾಹಿತಿಗಳ ಹೆಸರು ಇಡಬೇಕು ಎನಿಸಿದರೆ, ಹೊಸ ಬಡಾವಣೆಗಳಿಗೆ ಆ ಹೆಸರಿಡಬಹುದು. ಹೊಸದಾಗಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕ, ಪುರಂದರ, ಕುವೆಂಪು, ಕೆಂಪೇಗೌಡ, ಬಸವಣ್ಣನರ ಹೆಸರಿಟ್ಟು ಆನಂದಿಸಬಹುದು, 1ನೇ ಮೇನ್, 2ನೇ ಮೇನ್ ಎಂಬ ಹೆಸರುಗಳನ್ನು ಬದಲಾಯಿಸಿ ಕವಿಪುಂಗವರ, ಗಣ್ಯರ ಹೆಸರಿಡಬಹುದು. ಅದನ್ನು ಬಿಟ್ಟು ಪಾರಂಪರಿಕ ಹೆಸರುಗಳನ್ನು ಬದಲಿಸುವುದು ಸೂಕ್ತವೇ ಎಂಬ ಬಗ್ಗೆ ಚಿಂತನೆ ಆಗಲೇ ಬೇಕು.