ಮಹಾರಾಷ್ಟ್ರ ಪೊಲೀಸರಿಂದ ಸಚಿವ ಕಾಶಪ್ಪನವರ್ ಮೇಲೆ ಮೊಕದ್ದಮೆ
ಬಿಜಾಪುರ :ಸಾವಿರಾರು ರೈತರು ಸೋಮವಾರ ಸಂಜೆ ಶಿರನಾಳ- ಹೌಜ್ ಬ್ಯಾರೇಜ್ನ ಗೇಟುಗಳನ್ನು ಕಿತ್ತೆಸೆದು ಉಜನಿ ನೀರು ಕರ್ನಾಟಕದ ಭೀಮಾನದಿ ಪಾತ್ರದಲ್ಲಿ ಹರಿಯುವಂತೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಕಾಶಪ್ಪನವರ್ ಸೇರಿದಂತೆ ಇತರ 50 ಮಂದಿಯ ಮೇಲೆ ಮಹಾರಾಷ್ಟ್ರ ಸರ್ಕಾರ ಮೊಕದ್ದಮೆ ಹೂಡಿದೆ.
ಸಚಿವ ಕಾಶಪ್ಪನವರನ್ನು ಆರೋಪಟ್ಟಿಯಲ್ಲಿ ಮೊದಲಿಗನಾಗಿ ಮಹಾರಾಷ್ಟ್ರ ಪೊಲೀಸರು ಹೆಸರಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪೇಚಿಗೆ ಸಿಲುಕುವ ಪ್ರಸಂಗ ಎದುರಾಗಿರುವುದು ಮಾತ್ರವಲ್ಲದೆ, ಉಭಯ ರಾಜ್ಯಗಳ ನಡುವೆ ಗಡಿ ವಿವಾದದ ಜೊತೆಗೆ ನೀರು ಸಂಘರ್ಷವೂ ಪ್ರಾರಂಭವಾದಂತಾಗಿದೆ.
ಕಾಂಗ್ರೆಸ್ ಮುಖಂಡ ಚಂದ್ರಕಾಂತ ಬಿಜ್ಜರಗಿ, ಭೀಮಾ ನದಿ ನೀರು ಸಂರಕ್ಷಣಾ ಸಮಿತಿ ಸಂಚಾಲಕ ಪಂಚಪ್ಪ ಕಲ್ಬುರ್ಗಿ, ದೇವಪ್ಪ ಭೈರಗೊಂಡ, ಮಲ್ಲಪ್ಪ ಕುರಿ ಮತ್ತಿತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 427, 430 ಹಾಗೂ ಮಹಾರಾಷ್ಟ್ರ ನೀರಾವರಿ ಕಾಯ್ದೆ ಸೆಕ್ಷನ್ 93,94 ರ ಅಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು , ಆರೋಪಿಗಳ ವಿರುದ್ಧ ಗಲಭೆ, ಗಲಭೆಗೆ ಪ್ರಚೋದನೆ ಹಾಗೂ ನೀರು ಪೂರೈಕೆ ವ್ಯವಸ್ಥೆಗೆ ಹಾನಿ ಆರೋಪಗಳನ್ನು ಹೊರಿಸಲಾಗಿದೆ.
ಅಪರಾಧಿ ನಾನಲ್ಲವೆನ್ನುತ್ತಾರೆ ಸಚಿವ ಕಾಶಪ್ಪನವರ್
ಬ್ಯಾರೇಜ್ ಗೇಟ್ಗಳನ್ನು ಉದ್ರಿಕ್ತ ರೈತರು ಕಿತ್ತೆಸೆದಿರುವುದರಲ್ಲಿ ತಮ್ಮ ಕೈವಾಡವೇನೂ ಇಲ್ಲ ಎಂದು ಸಚಿವ ಕಾಶಪ್ಪನವರ್ ಸ್ಪಷ್ಟಪಡಿಸಿದ್ದಾರೆ. ಇಷ್ಟಕ್ಕೂ ಗಲಭೆ ನಡೆಯುತ್ತಿರುವ ಸಂದರ್ಭದಲ್ಲಿ ತಾವು ಆ ಸ್ಥಳದಲ್ಲಿಯೇ ಇರಲಿಲ್ಲ . ಮಹಾರಾಷ್ಟ್ರ ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್ ಇಂಜಿನಿಯರ್ ಕೋರೆ ಅವರನ್ನು ಭೇಟಿ ಮಾಡಲು ಬ್ಯಾರೇಜಿನ ಸ್ಥಳಕ್ಕೆ ಭೇಟಿ ನೀಡಿದ್ದೆವು. ಕೋರೆ ಅವರು ಅಲ್ಲಿರಲಿಲ್ಲವಾದ್ದರಿಂದ ವಾಪಸ್ಸಾದೆವು. ಆನಂತರವೇ ಗಲಭೆ ನಡೆದಿದೆ ಎಂದು ಕಾಶಪಪ್ಪನವರ್ ಹೇಳಿಕೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...