‘ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯರು ಬಲು ಅಪಾಯಕಾರಿ’
ಉಡುಪಿ : ನಮ್ಮ ರಾಷ್ಟ್ರದ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವಂತೆ ಹರಿಯಾಣ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರಾಮಾ ಜೋಯಸ್ ಇಲ್ಲಿ ಕರೆ ನೀಡಿದರು.
ಇಲ್ಲಿ ಎರಡು ದಿನಗಳ ಕಾಲ ನಡೆದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮಿಗಳ ಜನ್ಮಜಯಂತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಭ್ರಷ್ಟ ರಾಜಕೀಯದ ಸುಧಾರಣೆ ಧರ್ಮದ ನೆಲೆಗಟ್ಟಿನಲ್ಲಿಯೇ ಆಗಬೇಕು ಎಂದೂ ಅವರು ಅಭಿಪ್ರಾಯಪಟ್ಟರು.
ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗಿರುವ ಭಾರತೀಯರು ನಮ್ಮ ದೇಶಕ್ಕೆ ಅಪಾಯಕಾರಿಗಳಾಗಿ ಪರಿಣಮಿಸುತ್ತಿದ್ದಾರೆ ಎಂದೂ ಅವರು ಹೇಳಿದರು. ಪೇಜಾವರಿ ಶ್ರೀಗಳ ಕೊಡುಗೆಯನ್ನು ಸ್ಮರಿಸಿದ ಅವರು, ಹಿಂದೂಗಳನ್ನು ಒಗ್ಗೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೀಗಳು, ಮತಾಂತರದ ವಿರುದ್ಧವೂ ಧ್ವನಿ ಎತ್ತಿದರು ಎಂದು ಕೊಂಡಾಡಿದರು.
ಹರಿಜನರ ಕೇರಿಗೆ ಕಾಲಿಟ್ಟ ಮೊದಲ ಸನ್ಯಾಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಗಳು ರಾಷ್ಟ್ರಾದ್ಯಂತ ಸಂಸ್ಕೃತ ಪ್ರಚಾರಕ್ಕೆ ಹೋರಾಟವನ್ನೇ ನಡೆಸುತ್ತಿದ್ದಾರೆ ಎಂದರು.
(ಯು.ಎನ್.ಐ)