ಹೈಟೆನ್ಷನ್ ವೈರ್ಗೆ ರಥದ ತುದಿ ತಗುಲಿ ನಾಲ್ವರ ಸಾವು
ದೊಡ್ಡಬಳ್ಳಾಪುರ : ಇಲ್ಲಿ ನಡೆಯುತ್ತಿರುವ ಮುತ್ಯಾಲಮ್ಮನ ಜಾತ್ರೆಗಾಗಿ ದೊಡ್ಡಬಳ್ಳಾಪುರ ಠಾಣೆ ವ್ಯಾಪ್ತಿಯ ನಾಗಸಂದ್ರದಿಂದ ತರುತ್ತಿದ್ದ ರಥದ ತುದಿ ಹೈಟೆನ್ಷನ್ ವೈರ್ಗೆ ತಗುಲಿದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡು ಎತ್ತುಗಳೂ ಸತ್ತಿವೆ.
ನಾಗಸಂದ್ರದಿಂದ 15 ಅಡಿ ಎತ್ತರದ ರಥವನ್ನು ಮುತ್ಯಾಲಮ್ಮನ ಜಾತ್ರೆಗಾಗಿ ದೊಡ್ಡಬಳ್ಳಾಪುರಕ್ಕೆ ಎತ್ತಿನ ಗಾಡಿನ ನೆರವಿನಿಂದ ತರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಸತ್ತವರನ್ನು ನಾಗಸಂದ್ರದ ನಂಜಾಮರಿ (14), ಶಿವಕುಮಾರ್ (15), ಅಪ್ಪಾಜಪ್ಪ (45), ನಂಜೆಗೌಡ (40) ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹೈಟೆನ್ಷನ್ ವೈರ್ಗೆ ರಥದ ತುದಿ ತಗುಲಿದ್ದರಿಂದ ವಿದ್ಯುತ್ ಪ್ರವಹಿಸಿ ಈ ನಾಲ್ವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೂತಕದ ಕಳೆ ಆವರಿಸಿತ್ತಾದರೂ, ಜಾತ್ರೆ ಸುಮಗವಾಗಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ನಂಜನಗೂಡು ರಥ ಚಕ್ರಕ್ಕೆ ಸಿಕ್ಕಿ ವ್ಯಕ್ತಿಯಾಬ್ಬರು ಸತ್ತ ಘಟನೆ ಮರೆಯುವ ಮೊದಲೇ ಗೋಕಾಕ ಬಳಿಯ ಮರಡಿ ಮಠ ರಥೋತ್ಸವದಲ್ಲಿ ಒಬ್ಬರು ಸ್ಥಳದಲ್ಲೇ ಸತ್ತು, ಮತ್ತೊಬ್ಬರ ಎರಡೂ ಕಾಲುಗಳು ತುಂಡಾಗಿತ್ತು. ಅದಾದ ಕೆಲವೇ ದಿನದಲ್ಲೇ ಅದಾದ ನಂತರ ಚಿಕ್ಕಮಗಳೂರು ಬಳಿಯ ಸೀತಾಳಯ್ಯನ ಗಿರಿ ಮಠದ ಜಾತ್ರೆಯಲ್ಲಿ ಕಳೆದ ಮಾರ್ಚ್ 13ರಂದು ವೃದ್ಧರೊಬ್ಬರು ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಈಗ ಈ ರಥ ದುರಂತ ಸಂಭವಿಸಿದೆ. ರಾಜ್ಯದಲ್ಲಿ ರಥ ದುರಂತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಮುಖಪುಟ / ಇವತ್ತು... ಈ ಹೊತ್ತು...