ರಾಜ್ಯದಲ್ಲಿ ವಿದ್ಯುತ್ ಕ್ಷಾಮ, ಹೆಚ್ಚಿನವಿದ್ಯುತ್ಗೆ ಕೇಂದ್ರಕ್ಕೆ ಮೊರೆ
ಬೆಂಗಳೂರು : ವಿದ್ಯುತ್ ಕ್ಷಾಮಕ್ಕೆ ತುತ್ತಾಗಿರುವ ರಾಜ್ಯವು, ದಿನಕ್ಕೆ 14 ಮಿಲಿಯನ್ ವಿದ್ಯುತ್ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸ್ವಾಮ್ಯಕ್ಕೊಳಪಟ್ಟ ವಿದ್ಯುತ್ ಸ್ಥಾವರಗಳಿಂದ ಹೆಚ್ಚು ವಿದ್ಯುತ್ತನ್ನು ಪಡೆಯುವ ಪ್ರಯತ್ನಗಳನ್ನು ತೀವ್ರಗೊಳಿಸಲು ರಾಜ್ಯ ಸರಕಾರ ನಿಶ್ಚಯಿಸಿದೆ.
ರಾಜ್ಯದ ಹಿರಿಯ ಅಧಿಕಾರಿಗಳು ಕೇಂದ್ರದಿಂದ ವಿದ್ಯುತ್ ಪಡೆಯುವ ಬಗ್ಗೆ ದೆಹಲಿಯಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಈ ವಿಷಯವನ್ನು ರಾಜ್ಯ ವಿದ್ಯುತ್ ಖಾತೆ ಸಚಿವ ವೀರಕುಮಾರ್ ಪಾಟೀಲ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ 95 ಮಿಲಿಯನ್ ಯೂನಿಟ್ ವಿದ್ಯುತ್ ಅಗತ್ಯವಿದ್ದು, 57.24 ಮಿಲಿಯನ್ ಯೂನಿಟ್ ಉತ್ಪಾದನೆಯಾಗುತ್ತಿದೆ. 24.26 ಮಿಲಿಯನ್ ಯೂನಿಟ್ ವಿದ್ಯುತ್ ಕೇಂದ್ರ ನಡೆಸುತ್ತಿರುವ ವಿದ್ಯುತ್ ಸ್ಥಾವರಗಳಿಂದ ದೊರೆಯುತ್ತಿದೆ. ಮಹಾರಾಷ್ಟ್ರವು ನೀಡುವ ವಿದ್ಯುತ್ ದುಬಾರಿಯಾಗಿರುವುದರಿಂದ ರಾಜ್ಯವು ಮಹಾರಾಷ್ಟ್ರದೊಂದಿಗೆ ವಿದ್ಯುತ್ ಖರೀದಿಸಲು ಇಚ್ಚಿಸುವುದಿಲ್ಲ ಎಂದು ಪಾಟೀಲ್ ಹೇಳಿದರು.
ರೈತರ ಪಂಪ್ ಸೆಟ್ಗಳಿಗಾಗಿ ದಿನಕ್ಕೆ ಎಂಟು ಗಂಟೆಗಳ ಕಾಲ ಉತ್ತಮ ಗುಣಮಟ್ಟದ ವಿದ್ಯುತ್ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ಮೇ ಒಂದರಿಂದ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
(ಯುಎನ್ಐ)