ರಾಯಚೂರಿನಲ್ಲಿ ಸುರಿದ ಅಕಾಲ ಜಡಿಮಳೆಗೆ ಒಬ್ಬ ವ್ಯಕ್ತಿ ಬಲಿ
ರಾಯಚೂರು : ಮಂಗಳವಾರ ನಡುರಾತ್ರಿ ರಾಯಚೂರಿನಲ್ಲಿ ಆರಂಭವಾದ ಜಡಿ ಮಳೆಗೆ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಹಟ್ಟಿ ಗ್ರಾಮದ ಮನೆಯಾಂದಕ್ಕೆ ಮಂಗಳವಾರ ರಾತ್ರಿ ಮಿಂಚು ಬಡಿದು ಯರಗಟ್ಟಿಯ ರಂಗಪ್ಪ(20) ಅವರು ಮೃತರಾಗಿದ್ದಾರೆ. ಮನೆಯಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದೆ. ಇನ್ನೊಂದು ಪ್ರಕರಣದಲ್ಲಿ 15 ಆಡುಗಳು ಸತ್ತಿದ್ದು, ಇಬ್ಬರು ಹುಡುಗರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಅಕಾಲವಾಗಿ ಸುರಿದ ಜಡಿ ಮಳೆಗೆ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಜೋಳ ಮತ್ತು ನೆಲಗಡಲೆ ಬೆಳೆ ಹಾನಿಗೊಂಡಿದೆ. ರಾಯಚೂರಿನಲ್ಲಿ 40 ಮಿಲಿಮೀಟರ್ ಮಳೆಯಾಗಿದ್ದರೆ, ದೇವದುರ್ಗ ತಾಲ್ಲೂಕಿನಲ್ಲಿ 21 ಮಿಲಿಮೀಟರ್ ಮಳೆ ಸುರಿದಿದೆ. ಮಾನ್ವಿಯಲ್ಲಿ 2.5 ಮಿಲಿ ಮೀಟರ್, ಸಿಂಧನೂರು ಮತ್ತು ಲಿಂಗಸಗೂರಿನಲ್ಲಿ 2 ಮಿಲಿಮೀಟರ್ ಮಳೆಯಾಗಿದೆ.
ಬೇಸಗೆ ಸುಡು ಬಿಸಿಲಿಗೆ 41 ಡಿಗ್ರಿಗೇರಿದ್ದ ಉಷ್ಣಾಂಶದಿಂದ ರಾಯಚೂರು ಉರಿಯುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಗಡುಗು ಮಿಂಚಿನ ಮಳೆ ಆರಂಭವಾದಾಗ ಮಂದಿ ಖುಷಿ ಪಟ್ಟಿದ್ದರು. ಆದರೆ ಆರಂಭವಾದ ಮಳೆ ನಿಲ್ಲುವ ಸೂಚನೆ ಕಾಣಲಿಲ್ಲ. ಮಳೆಗಾಲಕ್ಕೆ ರೆಡಿಯಾಗಿರದ ಮಂದಿ ರೆಚ್ಚೆ ಹಿಡಿದು ಸುರಿದ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಬುಧವಾರ ಬೆಳಗು ಹರಿಯುವುದರೊಳಗೆ ಜಿಲ್ಲೆಯ ಉಷ್ಣಾಂಶ 35 ಡಿಗ್ರಿಗಿಳಿದಿತ್ತು.
(ಇನ್ಫೋ ವಾರ್ತೆ)