ದುರ್ಬಲ ವರ್ಗದ ಪರವಾಗಿ ದನಿ ಎತ್ತಿದ ಬಾಬು ಜಗಜೀವನರಾಂ
ಬೆಂಗಳೂರು : ಹಿಂದುಳಿದ ಹಾಗೂ ಬಡ ಪಂಗಡಗಳ ಜನತೆಯ ಏಳಿಗೆಗೆ ದುಡಿದವರಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಪ್ರಮುಖರು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಯಶಸ್ವಿ ಹಸಿರು ಕ್ರಾಂತಿಯಲ್ಲೂ ಜಗಜೀವನ ರಾಂ ಅವರು , ಮಾಜಿ ಕೇಂದ್ರ ಸಚಿವ ಸಿ. ಸುಬ್ರಹ್ಮಣ್ಯಂ ಅವರೊಂದಿಗೆ ಕೂಡಿ ಮಹತ್ವದ ಸೇವೆ ಸಲ್ಲಿಸಿದ್ದರು ಎಂದು ಕೃಷ್ಣ ಅಭಿಪ್ರಾಯಪಟ್ಟರು. ಗುರುವಾರ ನಡೆದ ಜಗಜೀವನರಾಂ ಅವರ 94 ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಂಪುಟ ಸಹೋದ್ಯೋಗಿಗಳು ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಚ್. ಶ್ರೀನಿವಾಸ್ ಸಮಾರಂಭದಲ್ಲಿ ಹಾಜರಿದ್ದರು.
ಜಗಜೀವನರಾಂ ನಿಜವಾದ ಭಾರತ ರತ್ನ . ಅಧಿಕಾರದಲ್ಲಿರಲಿ ಇಲ್ಲದಿರಲಿ ಎಲ್ಲರಿಂದಲೂ ಗೌರವ ಪಡೆದಿದ್ದ ವ್ಯಕ್ತಿತ್ವ ಅವರದು. ಅವರನ್ನು ಲೋಕಮಾನ್ಯ ತಿಲಕರೊಂದಿಗೆ ಹೋಲಿಸಬಹುದು ಎಂದು ಶ್ರೀನಿವಾಸ್ ಬಣ್ಣಿಸಿದರು. ದುರ್ಬಲ ವರ್ಗದವರಿಗೆ ಶಿಕ್ಷಣ ಕಲ್ಪಿಸುವುದು, ಆ ಮೂಲಕ ಮೂಢ ನಂಬಿಕೆಗಳ ಬಗೆಗೆ ಅವರಲ್ಲಿ ಜಾಗೃತಿ ಮೂಡಿಸುವ ಬಾಬು ಅವರ ಪ್ರಯತ್ನಗಳನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದರು.
(ಯುಎನ್ಐ)