ಹುದ್ದೆ ಆಹಾರ ಇಲಾಖೆ ಉಪನಿರ್ದೇಶಕ, ಸೊತ್ತಿನಮೌಲ್ಯ 1 ಕೋಟಿ
ತುಮಕೂರು : ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಎ. ಮರಿಗೌಡ ಅವರ ನಿವಾಸದ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಸುಮಾರು ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂಜಾನೆಯಿಂದ ಸಂಜೆಯವರಿಗೆ ಬೆಂಗಳೂರು, ಮೈಸೂರು ಹಾಗೂ ತುಮಕೂರುಗಳಲ್ಲಿರುವ ಮರಿಗೌಡರ ನಿವಾಸಗಳನ್ನು ಜಾಲಾಡಿದ ಪೊಲೀಸರು ಸೊತ್ತುಗಳಿಗೆ ಸಂಬಂಧಿಸಿದಂತೆ ಅನೇಕ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಮರಿಗೌಡರ ಪತ್ನಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ 2 ಲಕ್ಷ ರು.ನಗದು, 7 ಲಕ್ಷ ರು. ಮೌಲ್ಯದ ಕರ್ನಾಟಕ ವಿಕಾಸ ಪತ್ರ, 2 ಲಕ್ಷ ರು. ಮೌಲ್ಯದ ನಿಶ್ಚಿತ ಠೇವಣಿ ಪತ್ರಗಳು, ಒಂದು ಮಾಟಿಸ್ ಕಾರು, 2 ದ್ವಿಚಕ್ರ ವಾಹನಗಳು. 2.36 ಲಕ್ಷ ರು. ನ ಚಿನ್ನಾಭರಣಗಳು ಸೇರಿದಂತೆ ಅಪಾರ ಬೆಲೆಯ ಪೀಠೋಪಕರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ 5 ನಿವೇಶನಗಳು ಹಾಗೂ ಬಿಟಿಎಂ ಲೇಔಟ್ನಲ್ಲಿ ಒಂದು ಮನೆ, ಮೈಸೂರಿನಲ್ಲಿ 2 ನಿವೇಶನಗಳು ಹಾಗೂ ವಿಜಯನಗರದಲ್ಲಿ ಭವ್ಯ ಬಂಗಲೆ, ಶ್ರೀರಂಗಪಟ್ಟಣದ ಬ್ರಹ್ಮಪುರದಲ್ಲಿ 8 ಎಕರೆ ಜಮೀನನ್ನು ಮರಿಗೌಡ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಶಪಡಿಸಿಕೊಂಡಿರುವ ದಾಖಲೆಗಳನ್ನಾಧರಿಸಿ ಸೊತ್ತಿನ ಒಟ್ಟು ಮೌಲ್ಯವನ್ನು ಅಂದಾಜು ಮಾಡಲಾಗುತ್ತಿದೆ. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ .
ಲೋಕಾಯುಕ್ತ ಎಸ್ಪಿ ಮುನಿಸ್ವಾಮಿ, ಡಿವೈಎಸ್ಪಿ ಪಶುಪತಿಮಠ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಚ್.ಎಸ್. ಮಂಜುನಾಥ್, ಸ್ವಾಮಿ ಮತ್ತು ಸಬ್ ಇನ್ಸ್ಪೆಕ್ಟರ್ ದೊಡ್ಡಯ್ಯ ಭಾಗವಹಿಸಿದ್ದರು. ಆಹಾರ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕೆಲವು ತಿಂಗಳ ಹಿಂದೆ ಪ್ರಕಟವಾಗಿದ್ದ ಪತ್ರಿಕಾ ವರದಿಗಳನ್ನಾಧರಿಸಿ ದಾಳಿ ನಡೆಸಲಾಗಿದೆ.
(ಇನ್ಫೋ ವಾರ್ತೆ)