ನಂಜನಗೂಡಿನಲ್ಲಿ ಸಂಭ್ರಮದ ಪಂಚ ಮಹಾ ರಥೋತ್ಸವ
ನಂಜನಗೂಡು : ದಕ್ಷಿಣ ಕಾಶಿ, ಭೂಕೈಲಾಸ ಎಂದು ಖ್ಯಾತವಾದ ಕಪಿಲಾ ಹಾಗೂ ಕುಂಡಿನಿ ಸಂಗಮ ತೀರದಲ್ಲಿರುವ ನಂಜನಗೂಡಿನಲ್ಲಿ ಬುಧವಾರ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ಪಂಚ ಮಹಾ ರಥೋತ್ಸವ ಜರುಗಿತು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಮಹದೇವು ಅವರ ವಿಶೇಷ ಪೂಜೆಯಾಂದಿಗೆ ಆರಂಭವಾದ ರಥೋತ್ಸವದಲ್ಲಿ ಸಾಲಂಕೃತವಾದ ಐದು ರಥಗಳು ಒಟ್ಟಾಗಿ ಸಾಗುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಲಕ್ಷಾಂತರ ಭಕ್ತರು ಶ್ರೀಕ್ಷೇತ್ರ ನಂಜನಗೂಡಿಗೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಒಂದೇ ದಿನ ಒಂದೇ ದೇಗುಲದಲ್ಲಿ ಐದು ರಥಗಳನ್ನು ಎಳೆಯುವುದು ನಂಜನಗೂಡಿನ ವಿಶೇಷ. ದಕ್ಷಿಣ ಭಾರತದ ಮತ್ತಾವ ದೇವಾಲಯದಲ್ಲೂ ಇಂತಹ ಆಚರಣೆ ಇಲ್ಲ. ಬುಧವಾರ ನಡೆದ ಮಹಾ ರಥೋತ್ಸವದಲ್ಲಿ ಶ್ರೀಕಂಠೇಶ್ವರ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ದೇವರ ರಥಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು.
ಸೋಮವಾರದಿಂದಲೇ ನಂಜನಗೂಡಿಗೆ ಪ್ರವಾಹದಂತೆ ಹರಿದುಬಂದ ಲಕ್ಷಾಂತರ ಭಕ್ತರು, ಹೊಳೆಯಲ್ಲಿ ಸ್ನಾನ ಮಾಡಿ, ಶ್ರೀಕಂಠೇಶ್ವರನ ದರ್ಶನ ಮಾಡಿದರು. ರಥೋತ್ಸವದಲ್ಲಿ ಪಾಲ್ಗೊಂಡರು. ಎರಡು ವರ್ಷಗಳ ಹಿಂದೆ ಇಲ್ಲಿ ಸಂಭವಿಸಿದ್ದ ರಥ ದುರಂತದ ಹಿನ್ನೆಲೆಯಲ್ಲಿ ಈ ಬಾರಿ, ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
(ಮೈಸೂರು ಪ್ರತಿನಿಧಿಯಿಂದ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...