ರಕ್ಷಣಾ ವೈಫಲ್ಯಕ್ಕೆ ಕಾರಣರಾರು?ನೆಹರೂ ವಂಶವೋ, ಅಟಲ್ಜೀಯೋ
ಮೈಸೂರು : ಹೂ ಈಸ್ ರೆಸ್ಪಾನ್ಸಿಬಲ್ ಫಾರ್ ಇಂಡಿಯಾಸ್ ಡಿಫೆನ್ಸ್ ಲ್ಯಾಪ್ಸಸ್? ನೆಹರೂ ಫ್ಯಾಮಿಲಿ ಆರ್ ವಾಜಪೇಯಿ? ಹೀಗೊಂದು ಇಂಗ್ಲಿಷ್ ಕೈಪಿಡಿ. ಬರೆದಿರುವವರು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಡಾ.ಎಂ.ಆರ್.ತಂಗಾ. ಕನ್ನಡಕ್ಕೆ ತರ್ಜುಮೆಗೊಂಡ ಇದರ ಪ್ರತಿ ಮಂಗಳವಾರ ಬಿಡುಗಡೆಯಾಗಿದೆ. ಅನುವಾದ ಮಾಡಿರುವವರು ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್.
ರಕ್ಷಣಾ ಹಗರಣವನ್ನು ಬಯಲಿಗೆ ತಂದ ತೆಹಲ್ಕಾ ನಡೆಯ ಬಗೆಗಿನ ಜಿಜ್ಞಾಸೆಗಳಿಗೆ ಉತ್ತರ ಕೊಡುವ ಪ್ರಯತ್ನ ಈ ಕೈಪಿಡಿಯಲ್ಲಿ ನಡೆದಿದೆ. ಹಗರಣದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ರಕ್ಷಿಸುವ ಪ್ರಯತ್ನ ನನ್ನದಲ್ಲ. ತೆಹಲ್ಕಾ ಹೆಕ್ಕಿ ತೆಗೆದ ವಿಷಯದ ಬಗ್ಗೆ ವಿವಿಧ ಚಿಂತಕರು ಒಂದೊಂದು ಅಭಿಪ್ರಾಯ ಹೊರಗೆಡವಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ರಕ್ಷಣೆಗೆ ಸಂಬಂಧಿಸಿದ ಗಂಭೀರವಾದ ಐತಿಹಾಸಿಕ ಪ್ರಮಾದಗಳ ಬಗ್ಗೆ ಈ ಹೊತ್ತು ತಿಳಿಸುವುದು ಸೂಕ್ತವೆನಿಸಿತು. ತೆಹಲ್ಕಾ ಉದ್ದೇಶ ಮಹತ್ತರವಾದುದು. ಯಾವುದೋ ರಾಜಕೀಯ ಪಕ್ಷದ ಕುಮ್ಮಕ್ಕಿನಿಂದ ಇಂಥಾ ಕೆಲಸಕ್ಕೆ ಅವರು ಕೈ ಹಾಕಿರಲಾರರು ಎಂಬುದು ನನ್ನ ನಂಬುಗೆ ಎಂದು ತಂಗಾ ಹೇಳಿದರು.
ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯ ಕೈಪಿಡಿಗಳನ್ನು ಕೇಂದ್ರ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಮಂಗಳವಾರ ಬಿಡುಗಡೆ ಮಾಡಿದರು. ದೇಶದ ವಿಭಜನೆಗೆ ಆಂಗ್ಲರ ಪಿತೂರಿ, ನೆಹರೂ ಅವಿವೇಕತನ, ಕಾಂಗ್ರೆಸ್ ಆಳ್ವಿಕೆಯಲ್ಲಿ ರಕ್ಷಣಾ ಹಗರಣ, ತೆಹಲ್ಕಾ ಹಗರಣ ಸುಳ್ಳಿನ ಕಥೆಯೋ ಅಲ್ಲವೋ, ತೆಹಲ್ಕಾ ವರದಿ ಬಯಲಿನ ನಂತರ ಕಾಂಗ್ರೆಸಿಗರ ನಡಾವಳಿ, ಸರ್ಕಾರದ ಪ್ರತಿಸ್ಪಂದನ ಇತ್ಯಾದಿ ವಿಷಯಗಳನ್ನು ಕೈಪಿಡಿ ಒಳಗೊಂಡಿದೆ.
(ಇನ್ಫೋ ವಾರ್ತೆ)












Click it and Unblock the Notifications