ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ಭಾಷಣ
ಬೆಂಗಳೂರು : ತೆಹೆಲ್ಕಾ ಡಾಟ್ ಕಾಂ ಬಹಿರಂಗ ಪಡಿಸಿದ ರಕ್ಷಣಾ ಅವ್ಯವಹಾರ ಪ್ರಕರಣದಿಂದ ವಾಜಪೇಯಿ ನೇತೃತ್ವದ ಸರಕಾರದ ಕೀರ್ತಿಗೆ ಕುಂದುಂಟಾಗಿದೆ. ಜಾರ್ಜ್ ಫರ್ನಾಂಡಿಸ್ ರಾಜೀನಾಮೆ ಕೊಟ್ಟೂ ಆಗಿದೆ. ಸಂಸತ್ ಕಲಾಪ ನಡೆಯಲೂ ಅವಕಾಶ ನೀಡದೆ, ರಾಜೀನಾಮೆಗೆ ಪಟ್ಟು ಹಿಡಿದಿದ್ದ ವಿರೋಧ ಪಕ್ಷಗಳೂ ತಣ್ಣಗಾಗಿವೆ. ಈ ಸಂದರ್ಭದ ಲಾಭ ಪಡೆದು, ಕಳೆದು ಹೋದ ಜನಪ್ರಿಯತೆಯನ್ನು ಮರಳಿ ಪಡೆವ ಸಾಹಸವನ್ನು ಎನ್.ಡಿ.ಎ. ಆರಂಭಿಸಿದೆ.
ಅಭದ್ರಗೊಳಿಸುವ ಶಕ್ತಿಗಳನ್ನು ತಿರಸ್ಕರಿಸಿ, ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕೈ ಬಲಪಡಿಸಿ ಎಂಬ ಘೋಷಣೆಯಾಂದಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಕರ್ನಾಟಕ ಘಟಕ ಏಪ್ರಿಲ್ 5ರ ಗುರುವಾರ ಸಂಜೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸುತ್ತಿದೆ.
ಜನಪ್ರಿಯತೆ ಮತ್ತೆ ಗಳಿಸುವ ಈ ಅಭಿಯಾನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಭಾಗವಹಿಸುತ್ತಿದ್ದಾರೆ. ರಕ್ಷಣಾ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತ ಹಾಗೂ ಎನ್ಡಿಎ ಸಂಚಾಲಕರಾಗಿ ನೇಮಕಗೊಂಡ ಜಾರ್ಜ್ ಫರ್ನಾಂಡಿಸ್ ಕೂಡ ತಮ್ಮ ನೋವನ್ನು ಬೆಂಗಳೂರಿಗರೊಂದಿಗೆ ತೋಡಿಕೊಳ್ಳುತ್ತಿದ್ದಾರೆ.
ರಾಜಕೀಯ ಕವಲುದಾರಿಯಲ್ಲಿ ನಿಂತಿರುವ ಎನ್ಡಿಎಗೆ ಇಂತಹ ಒಂದು ಬೃಹತ್ ಸಾರ್ವಜನಿಕ ಸಭೆಯ ಅಗತ್ಯ ಇದ್ದೇ ಇದೆ. ಬಹುಶಃ ನ್ಯಾಷನಲ್ ಕಾಲೇಜು ಮೈದಾನದ ವೇದಿಕೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಸೂಕ್ಷ್ಮ ಅವಲೋಕನಕ್ಕೆ ನಾಂದಿ ಆಗುತ್ತದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ಸಭೆ ಅತ್ಯಂತ ಮಹತ್ವವಾದದ್ದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಹಲವು ಸಾಧನೆಗಳನ್ನು ಮಾಡಿತ್ತು. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ, ಕಾರ್ಗಿಲ್ ದಿಗ್ವಿಜಯ, ಜನಪರ ಕಾರ್ಯಕ್ರಮಗಳ ಅನುಷ್ಠಾನವೇ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳು ರಕ್ಷಣಾ ಅವ್ಯವಹಾರದ ಹಗರಣದಿಂದ ಸಂಪೂರ್ಣ ಮಸುಕಾಗಿ ಹೋಗಿವೆ. ಎನ್ಡಿಎ ಕೂಡ ಇತರ ರಾಜಕೀಯ ಪಕ್ಷಗಳಿಗಿಂತ ಹೊರತಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಜನತಾ ಜನಾರ್ದನರೆದುರು ಕುಬ್ಜವಾಗಿ ಹೋಗಿರುವ ಎನ್ಡಿಎ ನೇತೃತ್ವದ ಕೇಂದ್ರ ಸರಕಾರ ಸಂಸತ್ತಿನಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿ ತೆಹಲ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಅಂಟಿರುವ ಮಸಿಯನ್ನು ಜನರೆದುರೇ ತೊಳೆಯಲು ನಿರ್ಧರಿಸಿದೆ.
ಜಾರ್ಜ್ ರಾಜೀನಾಮೆಯಿಂದಲೂ ತೃಪ್ತರಾಗದ ವಿರೋಧ ಪಕ್ಷಗಳು ವಾಜಪೇಯಿ ನೇತೃತ್ವದ ಸರ್ಕಾರದ ರಾಜೀನಾಮೆಗೇ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಮತ ಇರುವ ಸರಕಾರ ರಾಜೀನಾಮೆ ನೀಡಬೇಕೆ? ರಾಷ್ಟ್ರ ಮತ್ತೊಂದು ಚುನಾವಣೆ ಎದುರಿಸಬೇಕೆ? ಪ್ರಜಾಪ್ರಭುತ್ವ ಇದನ್ನು ಒಪ್ಪುತ್ತದೆಯೇ? ಎಂಬ ಸವಾಲುಗಳನ್ನು ಪ್ರತಿಪಕ್ಷಗಳಿಗೂ ಹಾಗೂ ಜನರಿಗೂ ಎಸೆದಿರುವ ಎನ್.ಡಿ.ಎ. ಗುರುವಾರ ಬೆಂಗಳೂರಿನಲ್ಲಿ ನಡೆಸುತ್ತಿರುವ ಸಭೆಗೆ ಮಹತ್ವ ಬಂದಿದೆ.
ಪ್ರಧಾನಿ ವಾಜಪೇಯಿ, ಕೇಂದ್ರ ಸಚಿವರುಗಳಾದ ವೆಂಕಯ್ಯನಾಯ್ಡು, ಅನಂತ ಕುಮಾರ್, ಶ್ರೀನಿವಾಸ ಪ್ರಸಾದ್, ಧನಂಜಯ ಕುಮಾರ್ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಈ ಬೃಹತ್ ಸಾರ್ವಜನಿಕ ಸಭೆಯಲ್ಲಿ ಬೆಂಗಳೂರಿಗರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ವಾಜಪೇಯಿಯವರ ಹರಿತ ಭಾಷಣದಲ್ಲಿ ಸಮರ್ಥನೆಯ ಯಾವ ಹೊಸ ಅಂಶಗಳು ಹೊರಬೀಳಲಿವೆ ಎಂಬ ಬಗ್ಗೆ ರಾಷ್ಟ್ರಕ್ಕೇ ಕುತೂಹಲ ಮೂಡಿದೆ.
ಬಹಿಷ್ಕಾರ : ಸಂಯುಕ್ತ ಜನತಾದಳದ ಬಹಿಷ್ಕಾರದ ನಡುವೆಯೂ ಗುರುವಾರದ ಬೃಹತ್ ಬಹಿರಂಗ ಸಭೆಗೆ ಭರದ ಸಿದ್ಧತೆಗಳು ನಡೆದಿವೆ. ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಕಟೌಟ್ ಬ್ಯಾನರ್ಗಳು ಇದನ್ನು ಎನ್.ಡಿ.ಎ ಸಭೆ ಎಂದು ಪ್ರಕಟಿಸಿದ್ದರೂ ಕೂಡ ಸಮತಾಪಕ್ಷದ ನಾಯಕರ ವಿನಾ ಮತ್ತಾವ ಪಕ್ಷದ ನಾಯಕರೂ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ತೆಹಲ್ಕಾ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಸಾರಲು ನಡೆಯುತ್ತಿರುವ ಗುರುವಾರದ ಸಭೆಯ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಬಿ.ಜೆ.ಪಿ ಪ್ರಚಾರ ಯಾತ್ರೆಯನ್ನೂ ಕೈಗೊಂಡಿದೆ. ಮಂಗಳವಾರ ಸಂಜೆ ಆರಂಭಾದ ಈ ಪ್ರಚಾರ ಯಾತ್ರೆ ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲೂ ಸಂಚರಿಸಿ, ಪ್ರಧಾನಿ ಪಾಲ್ಗೊಳ್ಳುತ್ತಿರುವ ಸಭೆಗೆ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಪ್ರಯತ್ನವನ್ನೂ ಮಾಡುತ್ತಿದೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications