ಮೈಸೂರಿಂದ ಹಂಪಿಗೆ ಪ್ರಾಚ್ಯ ವಸ್ತು ಇಲಾಖೆ ಸ್ಥಳಾಂತರಿಸಲು ಆದೇಶ
ಮೈಸೂರು : 116 ವರ್ಷಗಳಷ್ಟು ಹಳೆಯ ಪ್ರಾಚ್ಯ ವಸ್ತು ಇಲಾಖೆಯನ್ನು ಹಂಪಿಗೆ ಸ್ಥಳಾಂತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಅಧಿಕೃತ ಮೂಲಗಳು ಮಂಗಳವಾರ ಈ ವಿಷಯವನ್ನು ತಿಳಿಸಿವೆ. ಕರ್ನಾಟಕ ಪರಂಪರೆ ಸಂರಕ್ಷಣಾ ಪ್ರಾಧಿಕಾರದ ಉಸ್ತುವಾರಿ ವಹಿಸಿದ್ದ ಆಗಿನ ಬ್ರಿಟಿಷಿಗ ಲೂಯಿ ರೈಸ್ 1885ರಲ್ಲಿ ಈ ಇಲಾಖೆಯನ್ನು ಸ್ಥಾಪಿಸಿದ್ದ. ಹಂಪಿ ಬಳಿಯಲ್ಲಿ ಕಳೆದ ವರ್ಷ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ, ಆ ಸೇತುವೆ ಕಾಮಗಾರಿ ನಿಲ್ಲಿಸದಿದ್ದರೆ ಹಂಪಿಗೆ ವಿಶ್ವ ಪರಂಪರೆ ಪಟ್ಟಿಯಿಂದ ಕೊಕ್ ಕೊಡುವುದಾಗಿ ಯುನೆಸ್ಕೋ ಹೇಳಿತ್ತು. ಈಗ ಸೇತುವೆ ನಿರ್ಮಾಣ ನಿಂತಿದೆ. ಸ್ಥಳೀಯ ಜನರಲ್ಲಿ ಅಸಮಾಧಾನ ಈಗಲೂ ಉಸಿರಾಡುತ್ತಿದೆ.
ಉತ್ತರ ಕರ್ನಾಟಕದ ಜನರಿಗೆ ಅನುಕೂಲ ಮಾಡಿಕೊಡಲು ಹಾಗೂ ಯುನೆಸ್ಕೋ ಮನವೊಲಿಸಲು ಪ್ರಾಚ್ಯ ವಸ್ತು ಇಲಾಖೆಯನ್ನು ಮೈಸೂರಿನಿಂದ ಹಂಪಿಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಸರ್ಕಾರದ ಸಮಜಾಯಿಷಿ. ಮೈಸೂರಿನ ಮಂದಿ ಹಾಗೂ ಇಲಾಖಾ ಸಿಬ್ಬಂದಿ ಇದು ತರವಲ್ಲ ಎಂದು ವಿಷಾದಿಸುತ್ತಿದ್ದಾರೆ.
ಸಂಸ್ಕೃತಿಯೂರಿಂದ ಹಳೆ ಇಲಾಖೆ ಸ್ಥಳಾಂತರಿಸೋದು ತರವಲ್ಲ
ಭಾರತೀಯ ಮಾನವಶಾಸ್ತ್ರ ಪರಿವೀಕ್ಷಣಾ ಕೇಂದ್ರ, ಭಾರತೀಯ ಪ್ರಾಚ್ಯ ವಸ್ತು ಪರಿಶೀಲನಾ ಕೇಂದ್ರ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್, ಎಪಿಗ್ರಫಿ ಸೆಂಟರ್ ಮೊದಲಾದವು ಮೈಸೂರಿನಲ್ಲಿವೆ. ವಿಶ್ವ ವಿದ್ಯಾಲಯ ಕೂಡ ಒಳ್ಳೆ ಕೆಲಸಗಳನ್ನು ಮಾಡುತ್ತಿದೆ. ಭೋಪಾಲ್ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ವಸ್ತು ಪ್ರದರ್ಶನಾಲಯವನ್ನು ಮೈಸೂರಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದಾಗಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಅನಂತಕುಮಾರ್ ಹೇಳಿದ್ದಾರೆ. ಇಂಥಾ ಸಂದರ್ಭದಲ್ಲಿ ಪ್ರಾಚ್ಯ ವಸ್ತು ಇಲಾಖೆಯನ್ನು ಹಂಪಿಗೆ ಸ್ಥಳಾಂತರಿಸುವುದು ತರವಲ್ಲ ಎನ್ನುತ್ತಾರೆ ಇಲಾಖೆಯ ಸಿಬ್ಬಂದಿ.
ಹಂಪಿಯಲ್ಲಿ ಸಾಕಷ್ಟು ಜಾಗ ಇಲ್ಲ : ಹಳೆಯ ನಾಣ್ಯಗಳ ಅನನ್ಯ ಸಂಗ್ರಹಣೆ ಹಾಗೂ ಪ್ರಾಚೀನ ಗ್ರಂಥ ಭಂಡಾರವನ್ನು ಇಲಾಖೆ ಹೊಂದಿದೆ. ಹಂಪಿಯಲ್ಲಿ ಇಲಾಖೆ ನಿರ್ವಹಣೆಗೆ ಸರ್ಕಾರ ಸಾಕಷ್ಟು ಜಾಗೆ ನೀಡಿಲ್ಲವಂತೆ. ಅಲ್ಲಿಗೆ ಇಲಾಖೆ ಸ್ಥಳಾಂತರವಾದರೆ ಅಪರೂಪದ ಪ್ರಾಚ್ಯ ವಸ್ತುಗಳ ನಿರ್ವಹಣೆ ದುಸ್ತರವಾಗುತ್ತದೆ. ರಾಜ್ಯದ ಪರಂಪರೆಗಳ ಕುರಿತು ಪ್ರಕಟವಾಗಿರುವ 18ನೇ ಸಂಚಿಕೆಯಲ್ಲಿ ಹಂಪಿಯ ವೈಭವವನ್ನೇ ತುಂಬಲಾಗಿದೆ. ಈಗ ಅತ್ಯಂತ ಹಳೆಯ ಹಾಗೂ ಜನಪ್ರಿಯ ಇಲಾಖೆಯಾಂದನ್ನು ಮೈಸೂರಿನಿಂದ ಹಂಪಿಗೆ ಸ್ಥಲಾಂತರಿಸಲು ಸರ್ಕಾರ ಹೊರಟಿದೆ. ಇದು ನ್ಯಾಯವಾದುದಲ್ಲ ಎಂದು ಇಲಾಖೆಯ ಮಂದಿ ಅಲವತ್ತುಕೊಳ್ಳುತ್ತಿದ್ದಾರೆ.
(ಯುಎನ್ಐ)