ಒಂದು ದಿನದ ಪಂದ್ಯಕ್ಕೆ ಸುನೀಲ್ ಜೋಶಿ, ಜಾವಗಲ್ ಶ್ರೀನಾಥ್
ಚೆನ್ನೈ : ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಅಂತರರಾಷ್ಟ್ರೀಯ ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡವನ್ನು ಭಾನುವಾರ ಪ್ರಕಟಿಸಲಾಗಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ವಂಚಿತರಾಗಿದ್ದ ಕರ್ನಾಟಕದ ಸುನೀಲ್ ಜೋಶಿ ಒಂದು ದಿನದ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಂಕಟೇಶ್ ಪ್ರಸಾದ್ ಆಯ್ಕೆದಾರರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಲಕ್ಷ್ಮಣ್ ಹಾಗೂ ಹರ್ಭಜನ್ ಸಿಂಗ್ ತಂಡಕ್ಕೆ ಮರಳಿದ್ದಾರೆ. ದೇಶೀ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರಿದ ದಿನೇಶ್ ಮೊಂಗಿಯಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿ ಅಧ್ಯಕ್ಷ ಚಂದೂ ಬೋರ್ಡೆ ಈ ವಿಷಯವನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಗಾಯಗೊಂಡಿರುವ ವೇಗದ ಬೌಲರ್ ಜಾವಗಲ್ ಶ್ರೀನಾಥ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಒಂದೆರೆಡು ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದು , ಮೊದಲ ಮೂರು ಪಂದ್ಯಗಳಲ್ಲಿ ಆಡುವುದು ಬಹುತೇಕ ಖಚಿತ ಎಂದು ಚಂದೂ ಬೋರ್ಡೆ ತಿಳಿಸಿದರು. ಮಾರ್ಚ್ 25 ರಿಂದ ಸೀಮಿತ ಓವರ್ ಪಂದ್ಯಗಳು ಪ್ರಾರಂಭವಾಗಲಿವೆ.
ತಂಡ ಇಂತಿದೆ - ಸೌರವ್ ಗಂಗೂಲಿ (ನಾಯಕ), ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಹೇಮಾಂಗ್ ಬದಾನಿ, ದಿನೇಶ್ ಮೊಂಗಿಯಾ, ವಿಜಯ್ ದಹಿಯ, ರಾಬಿನ್ ಸಿಂಗ್, ಸುನೀಲ್ ಜೋಶಿ, ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕರ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಶೆವಾಗ್.
(ಇನ್ಫೋ ವಾರ್ತೆ)