ರೈತರಿಗೆ ಉಚಿತ ವಿದ್ಯುತ್ ಒದಗಿಸುವುದು ಸಲ್ಲ -ಪ್ರಧಾನಿ
* ಶುಭಾಂಗಿ ಕಪ್ರೆ
ನವದೆಹಲಿ : ರೈತರಿಗೆ ಉಚಿತ ವಿದ್ಯುತ್ ಒದಗಿಸುವ ರಾಜ್ಯ ಸರ್ಕಾರಗಳ ನೀತಿಯನ್ನು ಪ್ರಗತಿಗಾಮಿ ಕ್ರಮವೆಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ವಾಜಪೇಯಿ, ಉಚಿತ ವಿದ್ಯುತ್ ಒದಗಿಸುವ ಗಿಮಿಕ್ಗಳನ್ನು ಕೈ ಬಿಡಬೇಕೆಂದು ರಾಜ್ಯಸರ್ಕಾರಗಳಿಗೆ ಸೂಚಿಸಿದ್ದಾರೆ. ವಿದ್ಯುತ್ ಕೊರತೆ ಇರುವ ಪರಿಸ್ಥಿತಿಯಲ್ಲಿ ಶುಲ್ಕ ವಿಧಿಸದಿರುವ ಬದಲು ದರ ವಿಧಿಸಿ ನಿಯಮಿತವಾಗಿ ವಿದ್ಯುತ್ ಪೂರೈಸುವುದೊಳಿತು ಎಂದು ಪ್ರಧಾನಿ ಹೇಳಿದ್ದಾರೆ.
ರಾಜ್ಯಗಳು ವಿದ್ಯುತ್ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಶನಿವಾರ ಪ್ರಧಾನಿ ವಾಜಪೇಯಿ ಮಾತನಾಡುತ್ತಿದ್ದರು. ವಿದ್ಯುತ್ಗೆ ಶುಲ್ಕ ವಿಧಿಸುವ ನಿರ್ಧಾರದ ಹಿಂದಿನ ಸುಧಾರಣಾ ಕ್ರಮಗಳನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ನಿರಂತರ ವಿದ್ಯುತ್ ಪೂರೈಕೆಯಿಂದ ರೈತರಿಗೆ ಅನುಕೂಲವೇ ಆಗುತ್ತದೆ ಎಂದು ವಾಜಪೇಯಿ ಹೇಳಿದರು.
1996 ರಲ್ಲಿ ಮಂಜೂರಾದ ರಾಷ್ಟ್ರೀಯ ಕನಿಷ್ಠ ಪ್ರಕ್ರಿಯಾ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಇದರ ಪ್ರಕಾರ, ಕೃಷಿಗೆ ಒದಗಿಸುವ ಪ್ರತಿ ಯುನಿಟ್ ವಿದ್ಯುತ್ಗೆ 50 ಪೈಸೆ ಶುಲ್ಕ ವಿಧಿಸಬಹುದಾಗಿದ್ದು , ಆನಂತರ ಮೂರು ವರ್ಷಕ್ಕೊಮ್ಮೆ 50 ಪೈಸೆಯ ಹೆಚ್ಚಳವಾಗುತ್ತದೆ ಎಂದರು. ರಾಜ್ಯಗಳಲ್ಲಿನ ವಿದ್ಯುತ್ ಕ್ಷೇತ್ರದ ಸುಧಾರಣಾ ಕಾರ್ಯಕ್ರಮಗಳ ಬಗೆಗೆ ಪ್ರಧಾನಿ ಅತೃಪ್ತಿ ವ್ಯಕ್ತಪಡಿಸಿದರು. ಖಾಸಗೀಕರಣ ಹಾಗೂ ವಾಣಿಜ್ಯೀಕರಣಗಳ ಮೂಲಕ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಮುಂದಾಗಬೇಕೆಂದು ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ.
ಅರ್ಥ ಕಳೆದುಕೊಂಡ ರಾಜ್ಯ ಬಿಜೆಪಿ ಕೂಗು : ಕರ್ನಾಟಕ ಸರ್ಕಾರ ರೈತರಿಗೆ ಒದಗಿಸುವ ವಿದ್ಯುತ್ ಮೇಲೆ ಶುಲ್ಕ ವಿಧಿಸಿರುವುದನ್ನು ವಿರೋಧಿಸುತ್ತಿದ್ದ ರಾಜ್ಯ ಬಿಜೆಪಿ ಘಟಕದ ಕೂಗು, ಪ್ರಧಾನಿಗಳ ಹೇಳಿಕೆಯಿಂದಾಗಿ ಅರ್ಥ ಕಳೆದುಕೊಂಡಿದೆ. ರೈತರಿಗೆ ಒದಗಿಸುವ ವಿದ್ಯುತ್ ಮೇಲೆ ಶುಲ್ಕ ವಿಧಿಸಬೇಕೆಂದು ಪ್ರಧಾನಿ ಅಭಿಪ್ರಾಯ ಪಟ್ಟಿರುವುದರಿಂದ, ಅವರು ಮುಖ್ಯಮಂತ್ರಿ ಕೃಷ್ಣ ಅವರ ವಿದ್ಯುತ್ ನೀತಿಯನ್ನು ಸಮರ್ಥಿಸಿದಂತೆಯೇ ಆಗಿದೆ.
(ಐಎಎನ್ಎಸ್)