ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣುವಿರಿ
ಸಿಗರೇಟು ಕೈ ಸುಟ್ಟದ್ದೆಷ್ಟು ? ಸಕ್ಕರೆಯ ಸಿಹಿ ಕಡಿಮೆಯಾಯಿತಾ ? ಈ ವರ್ಷವಾದರೂ ಕಾರು ಕೊಳ್ಳಲು ಸಾಧ್ಯವಾ ? ಷೇರುಗಳ ಕತೆಯೇನು ? ಇಂಥಾ ಎಲ್ಲಾ ಪ್ರಶ್ನೆ, ಗೊಂದಲಗಳು ಬಜೆಟ್ಟಿಗೆ ಮುಖ ಮಾಡಿಕೊಂಡ ನಮ್ಮಂಥವರಿಗೆ. ಯಾವುದರ ಸೊಲ್ಲಿಗೂ ಕಿವಿ ಕೊಡದೆ ಮುಂದುವರೆಯುವುದು ಹವಾಮಾನದ ಜಮಾನ.
ಹವೆ ಸಾಗುವುದು ತನಗಿಷ್ಟ ಬಂದಂತೆ. ಅದರ ಕರುಣ- ಹುಚ್ಚು ಗಳ ಕೆರಳುವಿಕೆಗೆ ಯಾರೂ ಕಾರಣರಾಗಲು ಸಾಧ್ಯವಿಲ್ಲ . ನಮ್ಮ ಮಾಜಿ ಮಂತ್ರಿ ಜಾನ್ನಂತವರು ಏನನ್ನಾದರೂ ಅಪವಾದ ನುಡಿಯುವುದಾದಲ್ಲಿ ... ಆ ಮಾತು ಬೇಡ ಬಿಡಿ. ಅವರೀಗ ಜಾಣರಾಗಿದ್ದಾರೆ. ಜಾಣರು ಮಾತನಾಡುವುದಿಲ್ಲ (ಗಟ್ಟಿಯಾಗಿ).
ತನ್ನಿಚ್ಚೆಯಂತೆಯೇ ನಡೆದಿರುವ ಒಣಹವೆ ರಾಜ್ಯದಲ್ಲಿ ಮುಂದುವರಿದಿತ್ತು . ಉತ್ತರ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಕೆಲ ಭಾಗಗಳಲ್ಲಿ ದಿನದ ಕನಿಷ್ಠ ತಾಪಮಾನ ಸ್ವಲ್ಪ ಬಾಡಿತ್ತು . ಉಳಿದಂತೆ ಬಿಸಿಲ ಬೇಗೆ ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು . ದಿನದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಷಿಯಸ್ ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಶಿವಮೊಗ್ಗದಲ್ಲಿ ದಾಖಲಾಗಿತ್ತು .
ಹವಾಮಾನ ಇಲಾಖೆಯ ವರದಿಯಂತೆ ಸದ್ಯಕ್ಕೆ ಹವಾಮಾನದಲ್ಲಿ ವೈಪರೀತ್ಯಗಳು ಕಂಡು ಬರುವ ಸಾಧ್ಯತೆಗಳಿಲ್ಲ . ಒಣಹವೆಯೇ ಮುಂದುವರಿಯುತ್ತದೆ. ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣಬಹುದು. ಗುರುವಾರದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ. ನಾಳೆ ಭೇಟಿಯಾಗುವ.