ದೇವ್ರು ಎಲ್ಲಾ ನೋಡಿದಾನೆ, ಯಾವ ತನಿಖೆಯೂ ಬೇಡ- ದೇವೇಗೌಡ
ಬೆಂಗಳೂರು : ತಮ್ಮ ಪತ್ನಿ ಹಾಗೂ ಸೊಸೆಯ ಮೇಲೆ ಆ್ಯಸಿಡ್ ಎರಚಿರುವ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆನ್ನುವ ಸರ್ಕಾರದ ಆದೇಶವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಿರಾಕರಿಸಿದ್ದಾರೆ.
‘ನಾನು ಆ ದೇವರು ಕೊಡೋ ನ್ಯಾಯವನ್ನೇ ನಂಬಿರೋನು. ಎಲ್ಲಾ ಭಗವಂತನ ಸನ್ನಿಧಿಯಲ್ಲಿ ಆತನ ಎದುರಿಗೇ ನಡೆದಿದೆ. ಪ್ರಕರಣಕ್ಕೆ ಖುದ್ದು ದೇವರೇ ಸಾಕ್ಷಿಯಾಗಿರುವಾಗ ಯಾರ ತನಿಖೆಯಾದರೂ ಯಾಕೆ ಬೇಕು? ನಮ್ಮಂಥ ಸಾಮಾನ್ಯ ಜನ ಏನು ಸಾಕ್ಷ್ಯ ಕೊಟ್ಟೇವು? ಈ ಪ್ರಕರಣಕ್ಕೆ ಯಾವುದೇ ತನಿಖೆ ಬೇಡ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ದೇವೇಗೌಡ ಪತ್ರ ಬರೆದು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ತಮ್ಮ ಪತ್ನಿ ಹಾಗೂ ಸೊಸೆಯಾಂದಿಗಿದ್ದ ವಿಶೇಷ ರಕ್ಷಣಾ ಸಿಬ್ಬಂದಿ ಬಂಧಿತನಾಗಿರುವ ಲೋಕೇಶ್ ಅವರನ್ನು ಪ್ರವೇಶ ದ್ವಾರದಲ್ಲಿ ತಡೆದರು. ಆದರೆ ಸ್ಥಳೀಯ ವ್ಯಕ್ತಿಯಾಬ್ಬ ಈತ ದೇವೇಗೌಡನ ಸಂಬಂಧಿ, ಒಳಗೆ ಬಿಡಿ ಎಂದು ಹೇಳಿದ ಕಾರಣ ಸಿಬ್ಬಂದಿ ಆತನನ್ನು ಒಳಗೆ ಬಿಟ್ಟರು. ಎಲ್ಲಾ ನಮ್ಮೆದುರಿಗೇ ಇರುವಾಗ ಇದಕ್ಕೆ ಯಾವ ತನಿಖೆಯೂ ಬೇಡವೆಂಬುದು ನನ್ನ ಮನವಿ ಎಂದು ಗೌಡರು ಪತ್ರದಲ್ಲಿ ಬರೆದಿದ್ದಾರೆ.
ಸತ್ಯಾನ್ವೇಷಣೆಗೆ ತನಿಖೆ ಒಳಿತು : ನ್ಯಾಯಾಂಗ ತನಿಖೆಯನ್ನು ನಿರಾಕರಿಸಿರುವ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಒತ್ತಾಯಪೂರ್ವಕವಾಗಿ ತನಿಖೆ ನಡೆಸುವುದು ಸರ್ಕಾರದ ಉದ್ದಿಶ್ಯವಲ್ಲ. ಆದರೂ ಸತ್ಯವನ್ನು ಬಯಲಿಗೆಳೆಯಲು ತನಿಖೆ ನಡೆಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಬಿಐ ತನಿಖೆ ನಡೆಯಲಿ : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಚ್.ಶ್ರೀನಿವಾಸ್ ಮುಖ್ಯಮಂತ್ರಿಗಳಿಗೆ ಇನ್ನೊಂದು ಪತ್ರ ಬರೆದಿದ್ದು, ಪ್ರಕರಣದಲ್ಲಿ ದೊಡ್ಡ ರಾಜಕೀಯ ಪಿತೂರಿ ಇರುವ ಸಾಧ್ಯತೆಯಿದೆ. ಆ ಕಾರಣ ತನಿಖೆ ನಡೆಸುವಂತೆ ಸಿಬಿಐಗೆ ಮೊರೆ ಹೋಗಬೇಕೆಂದು ಮನವಿ ಮಾಡಿದ್ದಾರೆ.
ಶೆಟ್ಟರ್- ಶಂಕರಮೂರ್ತಿ ಪತ್ರ : ಈ ಪ್ರಕರಣಕ್ಕೆ ಜಿಲ್ಲಾಡಳಿತದ ವೈಫಲ್ಯ ಕಾರಣವಾಗಿದೆಯೇ ಅಥವಾ ಭದ್ರತಾ ವ್ಯವಸ್ಥೆಯ ಲೋಪವೇ ಎಂಬುದನ್ನು ಪತ್ತೆ ಮಾಡಬೇಕು. ಯಾರಾದರೂ ಉಡಾಫೆ ತೋರಿದ್ದು ಬಯಲಿಗೆ ಬಂದರೆ ಅಂತಹವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಡಿ.ಎಚ್.ಶಂಕರಮೂರ್ತಿ ಮುಖ್ಯಮಂತ್ರಿ ಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ.
ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತ ಜನಜಂಗುಳಿ ನೆರೆದಿದೆ. ಇನ್ನೂ ತೀವ್ರ ನಿಗಾ ವಿಭಾಗದಲ್ಲಿರುವ ಚೆನ್ನಮ್ಮನವರನ್ನು ನೋಡಲು ವೈದ್ಯರು ಯಾರಿಗೂ ಅನುಮತಿ ಕೊಡುತ್ತಿಲ್ಲ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...