ಧಾರವಾಡದಲ್ಲಿ ರಾಜ್ಯ ನೀರಾವರಿ ನಿಗಮ ಕೇಂದ್ರ ಕಚೇರಿ ಉದ್ಘಾಟನೆ
ಧಾರವಾಡ : ಕಳೆದ ಸಾಲಿನ ಮುಂಗಡ ಪತ್ರದಲ್ಲಿ ಸರಕಾರ ನೀಡಿದ್ದ ಆಶ್ವಾಸನೆಯಂತೆ ಹಲವು ನಿಗಮ, ಮಂಡಳಿಗಳ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಗುರುವಾರ ಇಲ್ಲಿ ತಿಳಿಸಿದರು.
ಬೆಂಗಳೂರಿನಿಂದ ಧಾರವಾಡಕ್ಕೆ ಸ್ಥಳಾಂತರಗೊಂಡ ಕರ್ನಾಟಕ ರಾಜ್ಯ ನೀರಾವರಿ ನಿಗಮದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ರಾಜ್ಯ ಸರಕಾರ ನೇಮಿಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ಸಮಿತಿಯ ವರದಿಯನ್ನು ಜಾರಿ ಮಾಡಲು ಸರಕಾರ ಬದ್ಧವಾಗಿದೆ ಎಂದರು.
ರೈತರಿಗೆ ನೆರವಾಗಲು ಕೇಂದ್ರ ಸರಕಾರ ಬೆಂಬಲ ಬೆಲೆ ಖರೀದಿಯ ಕೊನೆಯ ದಿನಾಂಕವನ್ನು ಏರ್ಪಿಲ್ವರೆಗೆ ವಿಸ್ತರಿಸುವುದನ್ನು ಸ್ವಾಗತಿಸಿದರು. ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸಲಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮಗದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಅವರು, ಧಾರವಾಡದಲ್ಲಿ ಇಂದು ವಿಧ್ಯುಕ್ತವಾಗಿ ಕಾರ್ಯಾರಂಭಿಸಿರುವ ಈ ನೀರಾವರಿ ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿ ಘಟಪ್ರಭಾ, ಮಲಪ್ರಭಾ, ತುಂಗಾ ಮೇಲ್ದಂಡೆ, ಸಿಂಗಟಾಲೂರು ಏತ ನೀರಾವರಿ, ತುಂಗಾ ಏತ ನೀರಾವರಿ, ಮಾರ್ಕಂಡೇಯ, ಹರಿನಾಳ ಮತ್ತು ಕೃಷ್ಣ ಕಣಿವೆಯ ಯೋಜನೆಗಳು ಬರಲಿದ್ದು, ವಿಳಂಬವಾಗಿರುವ ನೀರಾವರಿ ಯೋಜನೆಗಳಿಗೆ ತೀವ್ರ ಚಾಲನೆ ದೊರಕಲಿದೆ ಎಂದರು.
ಧಾರವಾಡದ ವಾಲ್ಮೀಕಿ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಸಚಿವರು, ಶಾಸಕರು, ಸಂಸದರು, ಗಣ್ಯರು ಪಾಲ್ಗೊಂಡಿದ್ದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...