ಮಣಿಪುರದ ಪೊಲೀಸ್ ಮಹಾ ನಿರ್ದೇಶಕರಾಗಿ ಸಾಂಗ್ಲಿಯಾನ ?
ಬೆಂಗಳೂರು : ವೀರಪ್ಪನ್ ಶಿಕಾರಿಯಲ್ಲಿ ತೊಡಗಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಚ್.ಟಿ. ಸಾಂಗ್ಲಿಯಾನ, ಮಣಿಪುರದ ಪೊಲೀಸ್ ಮಹಾನಿರ್ದೇಶಕರಾಗಿ ನಿಯೋಜನೆಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಸಾಂಗ್ಲಿಯಾನ ಅವರು ತವರಿಗೆ ತೆರಳುವುದು ನಿಶ್ಚಯವಾದಲ್ಲಿ ಅವರ ವನವಾಸ ಕಾಲ ಸದ್ಯದಲ್ಲಿಯೇ ಕೊನೆಗೊಳ್ಳಲಿದೆ.
ಸಾಂಗ್ಲಿಯಾನ ಅವರ ಸೇವೆಯನ್ನು ತಮ್ಮ ರಾಜ್ಯಕ್ಕೆ ಒದಗಿಸವಂತೆ ಕೆಲವು ದಿನಗಳ ಹಿಂದೆ ಮಣಿಪುರ ಸರ್ಕಾರ ಕೇಂದ್ರದ ಮೂಲಕ ಕರ್ನಾಟಕಕ್ಕೆ ಮನವಿ ಸಲ್ಲಿಸಿತ್ತು . ಈ ಮನವಿಗೆ ರಾಜ್ಯ ಸರ್ಕಾರ ಕೂಡ ಧನಾತ್ಮಕವಾಗಿ ಸ್ಪಂದಿಸಿದೆ ಎಂದು ಮೂಲಗಳು ತಿಳಿಸಿವೆ.
ಸೇವಾವಧಿಗೆ ದಿನಕರ್ ಮನವಿ : ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಾಂಗ್ಲಿಯಾನ ಅವರನ್ನು ತವರಿಗೆ ಕರೆಸಿಕೊಳ್ಳುತ್ತಿರುವ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಿಗೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಅವರ ನಿವೃತ್ತಿಯ ದಿನ (ಫೆ.28) ಹತ್ತಿರವಾಗುತ್ತಿದೆ. ಈ ನಡುವೆ ದಿನಕರ್ ಅವರು ತಮ್ಮ ಸೇವಾವಧಿಯನ್ನು ಇನ್ನೂ ನಾಲ್ಕು ತಿಂಗಳು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೇವಾವಧಿಯನ್ನು ವಿಸ್ತರಿಸುವಂತೆ ಪತ್ರ ಬರೆದಿರುವ ದಿನಕರ್, ಯಾವುದೇ ಆಸೆ ಅಥವಾ ಅಗತ್ಯದಿಂದಾಗಿ ತಾವು ಸೇವಾ ವಿಸ್ತರಣೆ ಬಯಸುತ್ತಿಲ್ಲ . ವಿಶೇಷ ಸಂದರ್ಭಗಳಲ್ಲಿ ಸೇವಾ ವಿಸ್ತರಣೆಗೆ ರಾಜ್ಯ ಸರ್ಕಾರವನ್ನು ಕೋರಬಹುದೆಂದು ರಾಜ್ಯ ಸರ್ಕಾರ ಸೂಚಿಸಿರುವುದರಿಂದ ಮನವಿ ಸಲ್ಲಿಸಿರುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸಿಬಿಐ ನಿರ್ದೇಶಕರ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದ ಪ್ರಸ್ತುತ ರಾಜ್ಯ ಹೈಕೋರ್ಟ್ನಲ್ಲಿದ್ದು , ಜೂನ್ ಅಂತ್ಯದ ವೇಳೆಗೆ ನ್ಯಾಯಾಲಯ ತೀರ್ಪು ನೀಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ದಿನಕರ್ ಪತ್ರ ಬರೆದಿದ್ದಾರೆ.
(ಇನ್ಫೋ ವಾರ್ತೆ)