ಸರ್ಕಾರದ ನೂತನ ಸಾರಿಗೆ ನೀತಿಯಲ್ಲಿ ಬಸ್ಸು ಕಾಣದ ಹಳ್ಳಿಗೆ ಬಸ್ಸು
ಗುಲ್ಬರ್ಗಾ : ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ಬಸ್ಗಳನ್ನೇ ಕಾಣದ ಹಳ್ಳಿಗಳಿಗೆ ಬಸ್ಗಳನ್ನು ಒದಗಿಸುವ ನೀತಿಯನ್ನುಳ್ಳ ಹೊಸ ಸಾರಿಗೆ ನೀತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಸಾರಿಗೆ ಸಚಿವ ಸಗೀರ್ ಅಹ್ಮದ್ ತಿಳಿಸಿದ್ದಾರೆ.
ಬಸ್ ನಿಲ್ದಾಣಗಳನ್ನು ಕಾಣದ ಗ್ರಾಮಗಳಿಗೆ ಬಸ್ ನಿಲ್ದಾಣಗಳನ್ನು ಒದಗಿಸಲಾಗುವುದು. ರಾಜ್ಯದ 1600 ಗ್ರಾಮಗಳಿಗೆ ಬಸ್ ಸೇವೆ ಇಲ್ಲ . ಸಮರ್ಪಕವಾದ ರಸ್ತೆಗಳು ಹಾಗೂ ಸೇತುವೆಗಳು ಇಲ್ಲದಿರುವುದೇ ಈ ಗ್ರಾಮಗಳು ಸಾರಿಗೆ ಸಂಪರ್ಕದಿಂದ ವಂಚಿತಗೊಳ್ಳಲು ಕಾರಣ ಎಂದು ಸಗೀರ್ ಅಹ್ಮದ್ ಹೇಳಿದರು.
ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಹೆಚ್ಚಿನ ಬಸ್ಗಳನ್ನು ಒದಗಿಸಲಾಗುವುದು ಹಾಗೂ ಆ ಪ್ರದೇಶಗಳಲ್ಲಿ ಹೆಚ್ಚಿನ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಎಚ್ಕೆಡಿಬಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ 2 ಕೋಟಿ ರುಪಾಯಿ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಸದ್ಯದಲ್ಲೇ ಗುಲ್ಬರ್ಗಾ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನಾಲೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಮಿನಿ ಡಿಪೋ ಆರಂಭಿಸಲು ಅನುಮತಿ ನೀಡಲಾಗಿದೆ ಹಾಗೂ ಸುರಪುರ ಮತ್ತು ಅಫಜಲಪುರಗಳಲ್ಲಿ ಡಿಪೋ ಆರಂಭಿಸುವ ವಿಷಯಗಳನ್ನು ಪರಿಶೀಲಿಸಲಾಗುವುದು ಎಂದು ಸಗೀರ್ ಅಹ್ಮದ್ ಹೇಳಿದರು.
(ಇನ್ಫೋ ವಾರ್ತೆ)