ಸಿಪಿಐ ಹಿರಿಯ ಮುಖಂಡ, ಮಾಜಿ ಸಚಿವಇಂದ್ರಜಿತ್ ಗುಪ್ತಾ ನಿಧನ
ಕೋಲ್ಕತ್ತಾ : ಕೇಂದ್ರ ಸರ್ಕಾರದ ಮಾಜಿ ಸಚಿವ ಹಾಗೂ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡ ಇಂದ್ರಜಿತ್ ಗುಪ್ತಾ ಮಂಗಳವಾರ ಬೆಳಗ್ಗೆ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಗುಪ್ತಾ ಅವರು ದೀರ್ಘ ಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಕೋಲ್ಕತ್ತಾದ ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1960ರಲ್ಲಿ ಪ್ರಥಮಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಇಂದ್ರಜಿತ್ ಗುಪ್ತಾ ಅವರು, ಹನ್ನೊಂದು ಬಾರಿ ಲೋಕಸಭೆಗೆ ವಿವಿಧ ಕ್ಷೇತ್ರಗಳಿಂದ ಆರಿಸಿ ಬಂದಿದ್ದರು. ಈ ಬಾರಿ ಮಿಡ್ನಾಪುರ ಲೋಕಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು. ಸಿ.ಪಿ.ಐ.ನ ಪ್ರಧಾನ ಕಾರ್ಯದರ್ಶಿಯಾಗಿಯೂ ಗುಪ್ತಾ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕಾರ್ಮಿಕ ಹೋರಾಟಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ಗುಪ್ತಾ ಅವರು ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯಾ ಸೇರಿದಂತೆ ಹಲವು ಗಣ್ಯರು ಇಂದ್ರಜಿತ್ ಗುಪ್ತಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.