ಹಳೆಯ ಸ್ಕೂಟರ್ನಲ್ಲಿ ಸಚಿವ ಅನಂತಕುಮಾರ್ ಜಂಬೂಸವಾರಿ
ಬೆಂಗಳೂರು : ಬಾರೆ ರಾಜಕುಮಾರಿ, ಹೋಗೋಣ ಜಂಬೂ ಸವಾರಿ, ಹೋಗೋಣ ಜಂಬೂ ಸವಾರಿ ನಮ್ಮ ಹಳೆಯ ಸ್ಕೂಟರನ್ನೇರಿ..... ಇದು ಬಿ.ಆರ್. ಲಕ್ಷ್ಮಣರಾಯರ ಒಂದು ಗೀತೆ. ಇದ್ದಕ್ಕಿದ್ದಂತೆ ಈ ಹಾಡು ಏಕೆ ನೆನಪಿಗೆ ಬಂತು ಗೊತ್ತೆ. ನಿನ್ನೆ , (ಫೆ. 18) ಭಾನುವಾರ ನಮ್ಮ ಕೇಂದ್ರ ಸಚಿವರಾದ ಅನಂತಕುಮಾರ್ ಹಳೆಯ ಸ್ಕೂಟರ್ ಏರಿ ಬೆಂಗಳೂರು ಪ್ರದಕ್ಷಿಣೆ ಮಾಡಿದರು. ಜನರ ಕಷ್ಟ ಸುಖ ವಿಚಾರಿಸಿದರು.
ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಮಂತ್ರಿ ಮಹೋದಯರು ಜನಸಾಮಾನ್ಯರ ಬಳಿಗೆ ಬರುವುದು ಪರಿಪಾಠ. ಮಂತ್ರಿಗಳಾದ ಮೇಲೆ ಬಿಗಿ ಭದ್ರತೆಯಲ್ಲಿ, ಎ.ಕೆ. 47 ಹಿಡಿದ ಶಸ್ತ್ರಧಾರಿ ಕಮಾಂಡೋಗಳ ಬೆಂಗಾವಲಿನಲ್ಲಿ, ಕೆಂಪು ದೀಪ ಉರಿಯುವ ಕಾಂಟೆಸ್ಸಾ ಆರ್ ಬೆನ್ಜ್ ಕಾರಿನಲ್ಲಿ ಕುಳಿತು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಮಾತನಾಡಿ ಮಿಂಚಿನಂತೆ ಮಾಯವಾಗುವುದು ವಾಡಿಕೆ.
ಆದರೆ, ಅನಂತಕುಮಾರ್ ಜನಸಾಮಾನ್ಯರಂತೆ ಸ್ಕೂಟರ್ ಏರಿದರು. ತಾವೇ ಸ್ಕೂಟರ್ ಚಾಲನೆ ಮಾಡಿದರು. ಹಿಂಬದಿಯಲ್ಲೊಬ್ಬ ಪಿಲಿಯನ್ ರೈಡರ್. ತಾವೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳಾದ ರಾಜಾಜಿನಗರ, ಮಲ್ಲೇಶ್ವರದಲ್ಲಿ ಸ್ಕೂಟರ್ ಓಡಿಸಿ, ಹಳ್ಳ ಕೊಳ್ಳದ ರಸ್ತೆಯಲ್ಲಿ ಸ್ಕೂಟರ್ ಸವಾರಿಯ ಮಾಡಿದರು.
ಆಯ್ದ ಕಾರ್ಯಕರ್ತರ ಸಂಗಡ ತಮ್ಮ ಈ ಸ್ಕೂಟರ್ ಯಾತ್ರೆಯಲ್ಲಿ ಈ ಭಾಗದ ಜನರ ಕುಂದುಕೊರತೆ ವಿಚಾರಿಸಿದರು. ಇನ್ನು ಮುಂದೆ ಆಗಾಗ್ಗೆ ಅನಂತಕುಮಾರ್ ಸ್ಕೂಟರ್ ಮೇಲೆ ದಕ್ಷಿಣ ಲೋಕಸಭಾ ಕ್ಷೇತ್ರದ ಜನತೆಗೆ ದರ್ಶನ ನೀಡುವ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದಾರೆ. ಸಂಸದರ ನಿಧಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನೂ ಈ ಸಂದರ್ಭದಲ್ಲಿ ಮಾಡಲಿದ್ದಾರೆ.
ಯಾರಿಗೂ ತಿಳಿಸದೆ, ಯಾವ ಪ್ರಚಾರವೂ ಇಲ್ಲದೆ, ಏಕಾಏಕಿ ತಮ್ಮ ಬಡಾವಣೆಗೆ ಅದೂ ಸ್ಕೂಟರ್ ಏರಿ ಬಂದ ಸಚಿವರನ್ನು ಕಂಡು ಇಲ್ಲಿನ ಮತದಾರರು ದಂಗಾದರು. ರಸ್ತೆಯಲ್ಲಿದ್ದ ಕೊಳವೆ ಬಾಯಿಯ ಬಳಿ ಅನಂತ್ ಸ್ಕೂಟರ್ ನಿಲ್ಲಿಸಿ, ಆ ಕೊಳವೆ ಬಾವಿಯಲ್ಲಿ ನೀರು ಬರುತ್ತದೋ ಇಲ್ಲವೋ ಎಂಬುದನ್ನೂ ಖಾತ್ರಿ ಮಾಡಿಕೊಂಡರು.
ಬಾಲಂಗೋಚಿ : ಹಿಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬೆಂಗಳೂರಿನ ಅಣ್ಣಮ್ಮ ದೇವಿ ದೇವಾಲಯದ ಬಳಿ ಅದೂ ಒನ್ವೇನಲ್ಲಿ ತಮ್ಮ ಪಕ್ಷದ ಚುನಾವಣೆ ಚಿಹ್ನೆಯಾಗಿದ್ದ ಟ್ರ್ಯಾಕ್ಟರ್ ಓಡಿಸಿ ಭಾರಿ ಸುದ್ದಿ ಮಾಡಿದ್ದರು. ದೇವೇಗೌಡರು ಅದೂ ಡ್ರೆೃವಿಂಗ್ ಲೈಸೆನ್ಸ್ ಇಲ್ಲದೆ ಒನ್ವೇನಲ್ಲಿ ಹೋಗಿದ್ದ ವಿಷಯ ಮಾಧ್ಯಮಗಳಿಗೆ ಆಹಾರವಾಗಿತ್ತು.
ಆದರೆ, ಭಾನುವಾರ ಯಾರೂ ಕೇಂದ್ರ ಸಚಿವ ಅನಂತಕುಮಾರ್ ಬಳಿ ಡ್ರೆೃವಿಂಗ್ ಲೈಸೆನ್ಸ್ ಇದೆಯೋ ಇಲ್ಲವೋ ಎಂಬುದನ್ನು ಪ್ರಶ್ನಿಸಲಿಲ್ಲ. ‘ನಿಮ್ಮ ಅನಂತಕುಮಾರ್’ ಎಂಬ ಪತ್ರಿಕೆ ಮಾಡಿ, ತಮ್ಮ ಕ್ಷೇತ್ರದ ಮತದಾರರನ್ನು ತಲುಪುತ್ತಿರುವ ಅನಂತ್ರ ಈ ಸ್ಕೂಟರ್ಯಾತ್ರೆ. ಸೈಕಲ್ ಏರಿ ಹೈದಾರಾಬಾದ್ ಸುತ್ತುತ್ತಿದ್ದ ಎನ್.ಟಿ. ರಾಮರಾಯರ ಸ್ಟೈಲ್ಗಿಂತ ಭಿನ್ನ ಅಲ್ಲವೇ?